
ಹೊಳೆನರಸೀಪುರ: ಮಹಾಶಿವರಾತ್ರಿ ಹಬ್ಬದ ನಿಮಿತ್ತ ತಾಲ್ಲೂಕಿನ ಹರದನಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಕುಲದೇವರಾದ ದೇವೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಹಾಶಿವರಾತ್ರಿ ಹಬ್ಬದ ಮಹತ್ವವನ್ನು ವಿವರಿಸಿ ದೇವೇಗೌಡರು, ದೇಶದ ಜನತೆಗೆ ಒಳಿತಾಗಲಿ. ಜನರು ನೋವು ಮತ್ತು ಕಷ್ಟ ಅನುಭವಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ವಿದ್ಯಾವಂತರೂ ಕೆಲಸಕ್ಕಾಗಿ ಅಲೆಯುತ್ತಿದ್ದಾರೆ ಎಂದು ಹೇಳಿದರು.
ಹೈನುಗಾರಿಕೆಗೆ ಮಹತ್ವ ನೀಡಿದ ಎಚ್.ಡಿ.ರೇವಣ್ಣ ಕೊಡುಗೆ ಸ್ಮರಿಸಿದ ಅವರು, ಹಾಸನ ಜಿಲ್ಲೆಯಲ್ಲಿ ದಿನಕ್ಕೆ ಸುಮಾರು 12 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಚಿಕ್ಕಮಗಳೂರಿನಿಂದ 1.5 ಲಕ್ಷ ಲೀಟರ್, ಕೊಡಗಿನಿಂದ 30 ಸಾವಿರ ಲೀಟರ್ ಹಾಲು ಬರುತ್ತಿದೆ. ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸ್ವಲ್ಪಮಟ್ಟಿನ ಸುಧಾರಣೆ ಸಾಧ್ಯವಾಗಿದೆ. ಆದರೆ ಇನ್ನೂ ನಿರುದ್ಯೋಗ ಹಾಗೂ ಭೂಹೀನರ ಸಮಸ್ಯೆ ಇದೆ ಎಂದರು.
ಹಾಸನ ಜಿಲ್ಲೆಗೆ ಐಐಟಿ ಹೊರತುಪಡಿಸಿ ಬಹುತೇಕ ಎಲ್ಲ ರೀತಿಯ ಕಾಲೇಜುಗಳು ಮತ್ತು ಕೋರ್ಸ್ಗಳನ್ನು ರೇವಣ್ಣ ತಂದಿದ್ದಾರೆ. ನಮ್ಮ ಅವಧಿ ಮುಗಿಯುತ್ತಿದೆ. ಭಗವಂತ ಜ್ಞಾಪನಶಕ್ತಿ ಕೊಟ್ಟಿರುವವರೆಗೂ ಜನರಿಗೆ ಉಪಯೋಗವಾಗುವ ಕೆಲಸ ಮಾಡಬೇಕು ಎಂದು ಹೇಳಿದರು.
ನೂತನವಾಗಿ ನಿರ್ಮಾಣಗೊಂಡಿರುವ ಹಾಸನ ಮೆಗಾ ಡೇರಿಯನ್ನು ಪ್ರಧಾನಿ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಉದ್ಘಾಟನೆ ಮಾಡಲಿದ್ದು, ಅವರಿಗೆ ಆಹ್ವಾನ ನೀಡಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರದಿಂದ ₹150 ಕೋಟಿ ಅನುದಾನ ದೊರೆತಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಇವತ್ತು ಪುಣ್ಯದಿನ, ಯಾರ ಬಗ್ಗೆ ಟೀಕೆ ಮಾಡುವುದಿಲ್ಲ ಎಂದು ಹೇಳಿದರು.
ನೀರಾವರಿ ವಿಚಾರದಲ್ಲಿ ಇನ್ನೂ ಚರ್ಚೆ ಅಗತ್ಯವಿದೆ. ಗೋದಾವರಿ ತಿರುವು ಯೋಜನೆಯಿಂದ ತೆಲಂಗಾಣಕ್ಕೆ 47 ಟಿಎಂಸಿ, ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ 46 ಟಿಎಂಸಿ ನೀರು ನೀಡಲಾಗುತ್ತಿದೆ. ಮೇಲ್ಬಾಗದಲ್ಲಿರುವ ನಮ್ಮ ರಾಜ್ಯದಿಂದ ಹೊರಹೋಗುವ ನೀರನ್ನು ಕಡಿಮೆ ಮಾಡಬೇಕು. ಈ ವಿಚಾರದಲ್ಲಿ ನಾನು ಸಾಧ್ಯವಾದಷ್ಟು ಹೋರಾಟ ಮಾಡಿದ್ದೇನೆ ಎಂದರು.
ಇಂಡಿಯಾ–ಪಾಕಿಸ್ತಾನ ಪಂದ್ಯದ ಕುರಿತು ಚರ್ಚೆ ಬೇಡ ಎಂದ ದೇವೇಗೌಡರು, ಸ್ಫೂರ್ತಿಯಿಂದ ಆಡಲಿ. ಪೆಹಲ್ಗಾಮ್ ಘಟನೆ ಬಳಿಕ ಉಂಟಾದ ಅಡೆತಡೆ, ಸಮಸ್ಯೆ ಬಗೆಹರಿಯಲಿ ಎಂದು ಆಶಿಸಿದರು. ಶಾಸಕರಾದ ಎಚ್.ಡಿ.ರೇವಣ್ಣ, ಎ.ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.