ಹಾಸನ: ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿ ಸರ್ಕಾರಿ ಕಾಲೇಜಿಗಳಿಗೆ ಮೌಲ್ಯ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.
ಶಿಕ್ಷಣ ಎಂದರೇನು ಗೊತ್ತಿಲ್ಲ ಎಂಬ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಾಸನಕ್ಕೆ ಅವರ ಕೊಡುಗೆ ಏನು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಡವರ ಮಕ್ಕಳು ಕಲಿಯುವ ಕಾಲೇಜುಗಳಿಗೆ ಮೇಜು, ಪ್ರಯೋಗಾಲಯ, ಪುಸ್ತಕ ಸೌಲಭ್ಯ ಒದಗಿಸುವಂತೆ ಕೇಳಿದ್ದೇನೆ. ದೇವೇಗೌಡರ ಕುಟುಂಬದವರು ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ ಎಂದು ತಿರುಗೇಟು ನೀಡಿದರು.
‘ಸಚಿವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡ್ತಾರೆ ಅಂದುಕೊಂಡಿದ್ದೆ. ಬಿಜೆಪಿ ಸರ್ಕಾರ 5 ವರ್ಷ ಇದ್ದಾಗ ಹಾಸನಕ್ಕೆ ಒಂದು ಪ್ರಯೋಗಾಲಯ ಕೊಡಲು ಆಗಲಿಲ್ಲ. ಮೊಸಳೆಹೊಸಳ್ಳಿ ಎಂಜಿನಿಯರಿಂಗ್ ಕಾಲೇಜು ಮುಚ್ಚಿಸಲು ಹಠ ಹಿಡಿದಿದ್ದರು. ಈಗ ಇದೇ ಕಾಲೇಜು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ನಾನು ಹಳ್ಳಿ ಗಮಾಡ್ ಆಗಿ ನಮ್ಮೂರಿನ ಕಾಲೇಜನ್ನು ನಂ-1 ನಲ್ಲಿಟ್ಟಿದ್ದೀನಿ. ಇವರ ಮಂತ್ರಿ ಇರುವ ಕೆ.ಆರ್.ಪೇಟೆ ಎಂಜಿನಿಯರಿಂಗ್ ಕಾಲೇಜು 8ನೇ ಸ್ಥಾನದಲ್ಲಿದೆ’ ಎಂದು ಲೇವಡಿ ಮಾಡಿದರು.
‘ಸಚಿವರ ಬಗ್ಗೆ ಗೌರವ ಇದೆ. ಆದರೆ, ರಾಜಕೀಯವಾಗಿ ಅವರನ್ನು ಎದುರಿಸಲು ಸಿದ್ಧ. ಶಿಕ್ಷಣ ಕ್ರಾಂತಿ ಮಾಡಲು ನೇಮಿಸಿರೋ ವ್ಯಕ್ತಿ ಒಂದು ಸೀಟ್ಗೆ ₹40 ಲಕ್ಷ ತೆಗೆದುಕೊಳ್ಳುತ್ತಾರೆ’ ಎಂದು ಶಿಕ್ಷಣ ತಜ್ಞ ದೊರೆಸ್ವಾಮಿ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ತಮ್ಮ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರ ಟೀಕೆಗೆ ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಕೆಲ ನಿರುದ್ಯೋಗಿ ನಾಯಕರಿದ್ದಾರೆ. ಅವರಿಗೆಲ್ಲಾ ಪ್ರತಿಕ್ರಿಯೆ ಮಾಡಿದರೆ ನನ್ನ ಗೌರವ ಹಾಳಾಗುತ್ತೆ.ದೇಶದಲ್ಲಿ 50 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಈಗ 45 ಸ್ಥಾನಕ್ಕೆ ಬಂದಿದೆ ಎಂದ್ರೆ ಅರ್ಥ ಮಾಡಿಕೊಳ್ಳಿ. ನಮ್ಮದು ಕೇವಲ ಪ್ರಾದೇಶಿಕ ಪಕ್ಷ. ನಮ್ಮ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದರು.
‘ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಅವರು ಸ್ಪರ್ಧಿಸುತ್ತಿಲ್ಲ.ಯಾವತ್ತಾದರೂ ಒಂದು ದಿನ ಅವಕಾಶ ದೊರೆತರೆ ಹೊಳೆನರಸೀಪುರಕ್ಷೇತ್ರದಿಂದ ಸ್ಪರ್ಧಿಸಬಹುದು. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿವೆ. ಸ್ಥಳೀಯ ಬಿಜೆಪಿ ಶಾಸಕ ಪ್ರೀತಂ ಅವರು ಹಾಸನ ವಿಧಾನಸಭಾ ಕ್ಷೇತ್ರದಲ್ಲಿಸ್ಪರ್ಧಿಸುವಂತೆ ನಮಗೆ ಆಹ್ವಾನ ನೀಡಿದ್ದಾರೆ. ರೇವಣ್ಣನೇ ಸ್ಪರ್ಧಿಸಬೇಕಿಲ್ಲ. ಹಾಸನ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕೆಂದು ಕಾರ್ಯಕರ್ತರ ಅಭಿಪ್ರಾಯಪಡೆದು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.