ADVERTISEMENT

ಹಾಸನ: ಪಾಂಚಜನ್ಯ ಹಿಂದೂ ಗಣಪತಿ ಶೋಭಾಯಾತ್ರೆಗೆ ಅದ್ದೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 1:56 IST
Last Updated 4 ಸೆಪ್ಟೆಂಬರ್ 2025, 1:56 IST
<div class="paragraphs"><p>ಹಾಸನದ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಪಾಂಚಜನ್ಯ ಹಿಂದೂ ಗಣಪತಿಯ ಒಂದು ನೋಟ</p></div>

ಹಾಸನದ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಪಾಂಚಜನ್ಯ ಹಿಂದೂ ಗಣಪತಿಯ ಒಂದು ನೋಟ

   

ಹಾಸನ: ನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಬುಧವಾರ ಹಾಸನದಲ್ಲಿ ಆಯೋಜಿಸಿದ್ದ ಪಾಂಚಜನ್ಯ ಹಿಂದೂ ಗಣಪತಿಯ ಶೋಭಾಯಾತ್ರೆ ಹಾಗೂ ವಿಸರ್ಜನಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ನಗರದ ಸಾಹಿತ್ಯ ಪರಿಷತ್ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯ ಗಣೇಶ ಮೂರ್ತಿಗೆ 7 ದಿನಗಳ ಕಾಲ ನಡೆದ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬುಧವಾರ ಮಧ್ಯಾಹ್ನ ಶೋಭಾಯಾತ್ರೆಯ ಮೂಲಕ ಸಂಜೆ ವಿಸರ್ಜನೆ ಮಾಡಲಾಯಿತು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್‌ ಭವನದ ಆವರಣದಿಂದ ಡಾ.ಅಂಬೇಡ್ಕರ್, ಅಯೋಧ್ಯೆಯ ರಾಮಲಲ್ಲಾ , ಗೋಮಾತೆ ಸೇರಿದಂತೆ ವಿವಿಧ ಸ್ತಬ್ದಚಿತ್ರಗಳೊಂದಿಗೆ ಆರಂಭವಾದ ಶೋಭಾಯಾತ್ರೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಸಾವಿರಾರು ಮಂದಿ ಬಿಜೆಪಿ ಕಾರ್ಯಕರ್ತರು, ಆರ್‌ಎಸ್ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮುಖಂಡರು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಕೇಸರಿ ಶಾಲು ಹೊದ್ದ ಸಾವಿರಾರು ಯುವಕರು ಡಿಜೆ ತಾಳಕ್ಕೆ ಕುಣಿದು ಕುಪ್ಪಳಿಸಿದರು.

ಶೋಭಾಯಾತ್ರೆಗೆ ಶಾಸಕರಾದ ಸಿಮೆಂಟ್‌ ಮಂಜು, ಸ್ವರೂಪ್‌ ಪ್ರಕಾಶ್‌, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಸೇರಿದಂತೆ ಇತರ ಗಣ್ಯರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪ್ರೀತಂ ಗೌಡ, ‘ಹಲವು ವರ್ಷಗಳಿಂದ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದಂತೆ ಪಾಂಚಜನ್ಯ ಹಿಂದೂ ಗಣಪತಿಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ಜರುಗುತ್ತಿದೆ. ಕೇವಲ 500 ಮಂದಿಯೊಂದಿಗೆ ಆರಂಭವಾದ ಮಹೋತ್ಸವ ಇಂದು 25 ಸಾವಿರ ಮಂದಿ ಸೇರುವವರೆಗೆ ಬೆಳೆದಿದೆ ಎಂದರೆ, ಹಿಂದೂ ಯುವಕರು ಹಾಗೂ ಸಂಘಟನೆಯ ಶ್ರಮದ ಫಲ ಎಂದರು.

ಪೊಲೀಸ್ ಇಲಾಖೆಯಿಂದ ನಿಗದಿಪಡಿಸಿದಂತೆ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ, ರಾತ್ರಿ ದೇವಿಗೆರೆಯಲ್ಲಿ ಮುಕ್ತಾಯವಾಯಿತು. ನಂತರ ಧಾರ್ಮಿಕ ವಿಧಿ ವಿಧಾನದೊಂದಿಗೆ ದೇವಿಕೆರೆಯಲ್ಲಿ ತೆಪ್ಪೋತ್ಸವದ ಮೂಲಕ ಪಾಂಚಜನ್ಯ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಯಿತು.

ಸೈಹಾದ್ರಿ ಕೇಸರಿ ಬಳಗ ಸೇರಿದಂತೆ ಇತರೆ ಸಂಘದ ಸೇರಿದ್ದ ಸಾರ್ವಜನಿಕರಿಗೆ ಸದಸ್ಯರು ಪ್ರಸಾದ ವಿನಿಯೋಗ ಮಾಡಿದರು. ಪಾಂಚಜನ್ಯ ಹಿಂದೂ ಗಣಪತಿ ಸೇವಾ ಸಮಿತಿ ಅಧ್ಯಕ್ಷ ವಾಸು, ಗೌರವ ಕಾರ್ಯದರ್ಶಿ ದಯಾನಂದ, ಕಾರ್ಯದರ್ಶಿ, ವೇಣುಗೋಪಾಲ್, ಪ್ರಸನ್ನ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ರವಿಸೋಮು, ರಕ್ಷಿತ್ ಭಾರದ್ವಾಜ್, ಆರ್‌ಎಸ್ಎಸ್ ಮುಖಂಡ ಮೋಹನ್, ಶೋಭನ್ ಬಾಬು, ವಿಶಾಲ್ ಅಗರವಾಲ್, ಮೋಹನ್, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಘುಗೌಡ ಭಾಗವಹಿಸಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್‌

ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹಾಸನ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

4 ಮಂದಿ ಡಿವೈಎಸ್ಪಿ, 22 ಮಂದಿ ಸರ್ಕಲ್‌ ಇನ್‌ಸ್ಪೆಕ್ಟರ್‌, 54 ಸಬ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 635 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಶಸ್ತ್ರ ಮೀಸಲು ಪಡೆಯ ತುಕುಡಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆ ಮಾಡಲಾಗಿತ್ತು. ವಿಶೇಷವಾಗಿ ಅರಳೇಪೇಟೆ, ವಲ್ಲಭಭಾಯಿ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಗಣೇಶ ಮೂರ್ತಿ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.