
ಹೊಳೆನರಸೀಪುರ: ತಾಲ್ಲೂಕಿನ ಮಾವಿನಕೆರೆ ಲಕ್ಷ್ಮೀವೆಂಕಟೇಶ್ವರಸ್ವಾಮಿ ರಥೋತ್ಸವ ಭಾನುವಾರ ಬೆಳಿಗ್ಗೆ ಶ್ರದ್ಧಾ–ಭಕ್ತಿಯಿಂದ ನಡೆಯಿತು.
ರಥಾರೋಹಣ ಮೂರ್ತಿಗೆ ಪೂಜೆ ಸಲ್ಲಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ನಗಾರಿ ಬಾರಿಸಲಾಯಿತು. ನಗಾರಿ ಸದ್ದು ಕೇಳಿದ ಭಕ್ತರು ರಥವನ್ನು ಎಳೆಯಲು ಪ್ರಾರಂಭಿಸಿದರು.
‘ವೆಂಕಟೇಶ್ವರನಿಗೆ ಗೋವಿಂದ..’, ‘ಸಪ್ತಗಿರಿವಾಸ ಗೋವಿಂದ, ಗೋವಿಂದ..’ ಎಂದು ಘೋಷಣೆ ಕೂಗಿದರು. ಭಕ್ತರು ರಥಕ್ಕೆ ಹಣ್ಣು, ಜವನ ಎಸೆದರು.
ಭಕ್ತರಿಗೆ ಪ್ರಸಾದ, ಮಜ್ಜಿಗೆ, ಪಾನಕದ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಎಚ್.ಡಿ. ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಪ್ರಭಾರ ತಹಶೀಲ್ದಾರ್ ರಮೇಶ್, ಉದ್ಯಮಿಗಳಾದ ಪ್ರಕಾಶ್, ಎನ್.ಆರ್. ಅನಂತ್ಕುಮಾರ್, ವಾಸಣ್ಣ, ಜೈಪ್ರಕಾಶ್ ಭಾಗವಹಿಸಿದ್ದರು.
ಸಿಪಿಐ ಸಂತೋಷ್, ನಗರಠಾಣೆ ಎಸ್ಐ ಅಭಿಜಿತ್, ಗ್ರಾಮಾಂತರ ಠಾಣೆ ಎಸ್ಐ ರಮೇಶ್ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ದೇವಾಲಯದ ಪ್ರಧಾನ ಅರ್ಚಕ ಜನಾರ್ಧನ್ ಮತ್ತು ಸಂಗಡಿಗರು ರಥೋತ್ಸವದ ಪೂಜಾ ವಿಧಿವಿಧಾನ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.