
ಹೊಳೆನರಸೀಪುರ: ಪಟ್ಟಣದ ಕೋಟೆ ನೀಲಕಂಠೇಶ್ವರ ಪಾರ್ವತಿ ದೇವಿಯ ರಥೋತ್ಸವ ಸೋಮವಾರ ಬೆಳಿಗ್ಗೆ ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಬೆಳಿಗ್ಗೆ ಕೋಟೆ ರಥಬೀದಿಯಲ್ಲಿ ನೀಲಕಂಠೇಶ್ವರ, ಪಾರ್ವತಿ ದೇವಿಯ ಉತ್ಸವ ಮೂರ್ತಿಗಳ ಪ್ರಕಾರೋತ್ಸವ ನಡೆಸಿದ ನಂತರ ರಥಾರೋಹಣ ನಡೆಸಿ ಪೂಜಿಸಿದರು. 9 ಗಂಟೆ ವೇಳೆಗೆ ರಥೋತ್ಸವ ಪ್ರಾರಂಭವಾಯಿತು. ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಭಕ್ತರು ಕೋಟೆ ರಥಬೀದಿಯಲ್ಲಿ ರಥ ಎಳೆದು 11 ಗಂಟೆ ವೇಳೆಗೆ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು.
ರಥ ಸಾಗುವ ಮಾರ್ಗದ ಉದ್ದಕ್ಕೂ ಶಾರದ ಮಹಿಳಾ ಸಂಘ, ಮಾರುತಿ ಭಜನಾ ಮಂಡಳಿ, ಮಹಿಳಾ ಹರಿದಾಸ ಸಂಘ, ಸೌಂದರ್ಯ ಲಹರಿ ಮಹಿಳಾ ಸಂಘದ ಸದಸ್ಯರು ಭಕ್ತಿಗೀತೆಗಳು, ಸ್ತೋತ್ರಗಳನ್ನು ಪಠಿಸುತ್ತಾ ಸಾಗಿದರು. ರಮೇಶ್, ಎ. ಶ್ರೀಧರ್, ಶ್ರೀಕಂಠಪ್ರಸಾದ್, ಗಣೇಶ್, ನಾಗೇಶ್ ಕೌಂಡಿನ್ಯ, ಪಟ್ಟಾಭಿರಾಮ, ಎಚ್.ಎನ್. ವೆಂಕಟೇಶ್, ಶಂಕರ್ ನಾರಾಯಣ್ ಏತಾಳ್, ಬಾ.ರಾ. ಸುಬ್ಬರಾಯ ಭಾಗವಹಿಸಿದ್ದರು.
ಶಿವರಾತ್ರಿ ಅಂಗವಾಗಿ ಈ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಗಿನ ಜಾವದ ವರೆಗೂ ಪೂಜಾ ವಿಧಾನಗಳು, ಹೋಮ ಹವನಗಳು ಶ್ರದ್ಧಾಭಕ್ತಿಯಿಂದ ನಡೆದವು. ನಗರದ ಹಾಗೂ ಗ್ರಾಮೀಣ ಪ್ರದೇಶದ ಸಾವಿರಾರು ಜನರು ಬೆಳಗಿನ ಜಾವದ ವರೆಗೂ ನೀಲಕಂಠೇಶ್ವರ, ಓಂಕಾರೇಶ್ವರ, ಹೊಳೆದಡದ ಲಕ್ಷ್ಮಣೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆಸಲ್ಲಿಸಿ ಜಾಗರಣೆ ಮಾಡಿದರು.
ಲಕ್ಷ್ಮಣೇಶ್ವರ ದೇವಾಲಯದಲ್ಲಿ ಸಮಿತಿಯವರು ವಿವಿಧ ಮಹಿಳಾ ಸಂಘಗಳಿಂದ ಭಜನಾ ಕಾರ್ಯಕ್ರಮ, ಶಿವಕುಮಾರ್ ಆಚಾರ್ ಅವರಿಂದ ಗೀತಗಾಯನ ಕಾರ್ಯಕ್ರಮ, ಹಾಡುಗಾರ ಕೃಷ್ಣಾ ಆರ್ಮುಗಂ ಆಚಾರ್ ಅವರಿಂದ ಭಕ್ತಿಗೇತೆಗಳ ಕಾರ್ಯಕ್ರಮ ಏರ್ಪಡಿಸಿದ್ದರು. ಹಾಡುಗಾರ ಕೃಷ್ಣ ಅವರು ಶಿವಪ್ಪ ಕಾಯೋತಂದೆ, ಶಿವನೊಲಿದರೆ ಭಯವಿಲ್ಲ ಶಿವನಾಮಕೆ ಸಾಟಿಇಲ್ಲ, ಮಾದೇಶ್ವರ ದಯಬಾರದೆ, ಓಂ ಶಿವೋ ಹೋಂ ಹಾಡುಗಳನ್ನು ಹಾಡಿದಾಗ ಸಭಿಕರು ಹಾಡನ್ನು ಮೆಚ್ಚಿ 2000ಕ್ಕೂ ಹೆಚ್ಚು ಹಣವನ್ನು ಕೃಷ ಅವರಿಗೆ ಬಹುಮಾನವಾಗಿ ನೀಡಿದರು.
ದೇವಾಲಯದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ದೇವಾಲಯ ಸಮಿತಿಯ ಎಚ್.ಎಸ್. ಪುಟ್ಟಸೋಮಪ್ಪ, ಎಸ್.ಗೋಕುಲ್, ಪುರಸಭಾ ಸದಸ್ಯ ಎ. ಜಗನ್ನಾಥ್, ನಾಗರಾಜ್, ಪ್ರಹ್ಲಾದ್, ಶಿವಕುಮಾರ್, ನರಸಿಂಹಶೆಟ್ಟಿ, ಅಶೋಕ್, ಚಂದ್ರಮತಿ, ಪ್ರಭಾ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.