ADVERTISEMENT

ಹಾಸನ | ಅಕ್ರಮ ಭೂ ಮಂಜೂರಾತಿ: ಕ್ರಮಕ್ಕೆ ಸೂಚನೆ

ಸಭೆ ನಡೆಸಿದ ಪುನರ್ವಸತಿ, ಪುನರ್‌ ನಿರ್ಮಾಣ ಆಯುಕ್ತ ಮೊಹಮ್ಮದ್‌ ಮೊಹಸಿನ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 13:31 IST
Last Updated 29 ಸೆಪ್ಟೆಂಬರ್ 2022, 13:31 IST
ಮೊಹಮ್ಮದ ಮೊಹಸಿನ್‌
ಮೊಹಮ್ಮದ ಮೊಹಸಿನ್‌   

ಹಾಸನ: ಹೇಮಾವತಿ, ಯಗಚಿ ಹಾಗೂ ವಾಟೆಹೊಳೆ ಜಲಾಶಯ ಯೋಜನಾ ನಿರಾಶ್ರಿತರ ಭೂ ಮಂಜುರಾತಿಗೆ ಸಂಭಂದಿಸಿದಂತೆ 2005 ರಿಂದ 2019ರವರೆಗಿನ ಬಾಕಿ ಇರುವ ಎಲ್ಲ ಪ್ರಕರಣಗಳ ವಿಚಾರಣೆಯನ್ನು ತಿಂಗಳಲ್ಲಿ ಪೂರ್ಣಗೊಳಿಸಬೇಕು. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ 15 ದಿನಗಳೊಳಗೆ ಕ್ರಮ ಜರುಗಿಸಿ, ವರದಿ ನೀಡುವಂತೆ ಕಂದಾಯ ಇಲಾಖೆ ಪುನರ್ವಸತಿ ಮುತ್ತು ಪುನರ್ ನಿರ್ಮಾಣ ಆಯುಕ್ತ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಲಾಶಯ ಯೋಜನೆಗಳಿಗೆ ಜಮೀನು ಕಳೆದುಕೊಂಡಿರುವ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡುವಲ್ಲಿ ನಕಲಿ ದಾಖಲೆ ಸೃಷ್ಟಿಸಿರುವ ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು.

2005 ರಿಂದ 2019ರವರೆಗಿನ 977 ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದ್ದು, 535 ಪ್ರಕರಣಗಳ ಮಂಜೂರಾತಿ ರದ್ದು ಮಾಡಲಾಗಿದೆ. ಇದರಲ್ಲಿ ಬಾಕಿ ಇರುವ 442 ಪ್ರಕರಣಗಳಲ್ಲಿ ತುರ್ತಾಗಿ ಅರಣ್ಯ ಇಲಾಖೆ ಅಭಿಪ್ರಾಯ ಪಡೆದು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಇದಲ್ಲದೇ ವಿಚಾರಣೆಗೆ ಬಾಕಿ ಇದ್ದ 2005 ರಿಂದ 2015 ರವರೆಗಿನ 228 ಹಾಗೂ 2015 ರಿಂದ 2019ರವರೆಗಿನ 447 ಪ್ರಕರಣಗಳ ವಿಚಾರಣೆಯನ್ನೂ ತಿಂಗಳೊಳಗೆ ಮುಗಿಸಿ, ಸರ್ಕಾರಕ್ಕೆ ವರದಿ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥ್, ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್ ಭಾಯಲ್‌, ಈವರೆಗಿನ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಕಲೇಶಪುರದ ಉಪ ವಿಭಾಗಾಧಿಕಾರಿ ಪ್ರತಿಕ್ ಭಾಯಲ್ ಮಾತನಾಡಿ, ಸಕಲೇಶಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಭೂ ಮಂಜುರಾತಿ ರದ್ದು ಮಾಡಲಾಗಿರುವ 405 ಪ್ರಕರಣಗಳ ಪೈಕಿ 135 ಪ್ರಕರಣಗಳಲ್ಲಿ ಮ್ಯೂಟೇಶನ್ ರದ್ದುಪಡಿಸಲು ಆದೇಶಿಲಾಗಿದೆ. ಉಳಿದ ಪ್ರಕರಣಗಳು ಖಾತೆ ಆಗಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಶಾಲುದ್ದೀನ್ ಗದ್ಯಾಲ್, ಚಿಕ್ಕಮಗಳೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.