ADVERTISEMENT

ಎತ್ತಿನಹೊಳೆ ಯೋಜನೆಯಲ್ಲಿ ನೂರಾರು ಕೋಟಿ ಅವ್ಯವಹಾರ: ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 14:16 IST
Last Updated 9 ಜುಲೈ 2021, 14:16 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ವಿಶ್ವೇಶ್ವರಯ್ಯ ಜಲ ನಿಗಮದಿಂದ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯಲ್ಲಿಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಹಾಲಿ ನ್ಯಾಯಾಧೀಶರು ಅಥವಾ ಸಿಬಿಐ ತನಿಖೆಗೆಒಳಪಡಿಸಬೇಕು ಎಂದು ಶಾಸಕ ಎಚ್‌.ರೇವಣ್ಣ ಆಗ್ರಹಿಸಿದರು.

ಎತ್ತಿನಹೊಳೆ ನಾಲಾ ಕಾಮಗಾರಿಗೆ ಮೊದಲು ₹12,900 ಕೋಟಿಗೆ ಅನುಮೋದನೆ ದೊರೆತಿತ್ತು. ಈಗ ಯೋಜನೆ ಪರಿಷ್ಕೃತಗೊಂಡು ₹23 ಸಾವಿರ ಕೋಟಿಗೆ ಪ್ರಸ್ತಾವನೆಸಲ್ಲಿಸಿದ್ದು, ಇನ್ನೂ ಅನುಮೋದನೆ ದೊರೆತಿಲ್ಲ. ಆದರೂಹತ್ತು ಕಂಪನಿಗಳಿಗೆ ₹16ಸಾವಿರ ಕೋಟಿಗೆ ಟೆಂಡರ್‌ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ
ಆರೋಪಿಸಿದರು.

ಎತ್ತಿನಹೊಳೆ ಯೋಜನೆಯಲ್ಲಿ ನಾಲ್ಕು ವಿಭಾಗಗಳಿದ್ದು, ಸಕಲೇಶಪುರ ವಿಭಾಗದಲ್ಲಿ ₹4,500 ಕೋಟಿ, ಅರಸೀಕೆರೆ ₹2,500 ಕೋಟಿ, ತುಮಕೂರು ಹಾಗೂ ಮಧುಗರಿವಿಭಾಗದಲ್ಲಿ ತಲಾ ₹4,500 ಮೊತ್ತದ ಕಾಮಗಾರಿಗೆ ನಡೆಯುತ್ತಿದೆ. ಅರಸೀಕೆರೆ ಮತ್ತುಸಕಲೇಶಪುರ ಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಗುತ್ತಿಗೆದಾರರು ಬರೆದುಕೊಂಡುಬರುವ ಬೋಗಸ್‌ ಬಿಲ್‌ಗಳಿಗೆ ಪಂಚತಾರಾ ಹೋಟೆಲ್‌ಗಳಲ್ಲಿ ಕುಳಿತು ಸಹಿ ಮಾಡುತ್ತಿದ್ದಾರೆ.
ಅಲ್ಲದೇ ಕಲ್ಲು ಬಂಡೆ ತೆರವು, ಕಲ್ಲು ಬಂಡೆ ಇಲ್ಲದಿದ್ದರೂ, ಬಂಡೆ ಸಿಡಿಸಲಾಗಿದೆ ಎಂದು ₹20 ಕೋಟಿ ಮೊತ್ತದ ಬೋಗಸ್ ಬಿಲ್‌ ಸೃಷ್ಟಿಸಲಾಗಿದೆ ಎಂದು ದೂರಿದರು.

ADVERTISEMENT

ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಯಾಗಿರುವ ಎನ್‌.ಲಕ್ಷ್ಮಣರಾವ್‌ ಪೇಶ್ವೆ ಅವರಿಗೆ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜವಾಬ್ದಾರಿ ಸಹ ನೀಡಲಾಗಿದೆ. ಇವರ ವಿರುದ್ಧ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲದೇ 12 ವರ್ಷಗಳಿಂದ ತಮ್ಮ ಸಂಬಳವನ್ನೇ ಡ್ರಾ ಮಾಡಿಕೊಂಡಿಲ್ಲ. ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ಕೃಷ್ಣ ಜಲಭಾಗ್ಯ ನಿಗಮದ ಕಾರ್ಯದರ್ಶಿಯಾಗಿಯೂ ನೇಮಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜನರ ತೆರಿಗೆ ಹಣ ಪೋಲಾಗಬಾರದು. ರಾಜ್ಯದಲ್ಲಿ ಲೂಟಿ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಕಣ್ಮುಚ್ಚಿ ಕುಳಿತಿದ್ದಾರೆ. ಯೋಜನೆಯಲ್ಲಿ ಅವ್ಯವಹಾರ ನಡೆದಿಲ್ಲ ಎನ್ನುವುದಾದರೆ ಸಮಗ್ರ ತನಿಖೆಗೆ ಸಿ.ಎಂ ಆದೇಶಿಸಲಿ. ಇಲ್ಲವಾದರೆ ಹಾಲಿ ನ್ಯಾಯಾಧೀಶ ಅಥವಾ ಸಿಬಿಐ ಮೂಲಕ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

2021-22ನೇ ಸಾಲಿನಲ್ಲಿ ಹಾಸನ ಜಿಲ್ಲೆಗೆ ಮಾರ್ಚ್ 21ರಂದು ಎತ್ತಿನ ಹೊಳೆ ಯೋಜನೆ ಭೂ ಪರಿಹಾರಕ್ಕೆ ₹400 ಕೋಟಿ ಬಿಡುಗಡೆ ಮಾಡಲಾಗಿದೆ. ಜುಲೈ 9ರ ವರೆಗೆ ಕೇವಲ ₹200 ಕೋಟಿ ಖರ್ಚು ಮಾಡಲಾಗಿದೆ. ಇನ್ನೂ 200 ಕೋಟಿ ಖರ್ಚಾಗದೆ ಉಳಿದಿದೆ. ಆದರೆ, ಯೋಜನೆಗೆ ಭೂಮಿ ಕಳೆದುಕೊಂಡ ರೈತರು ನಿತ್ಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಎನ್ನುತ್ತಿದೆ. ಮತ್ತೊಂದು ಕಡೆ ಈ ರೀತಿ ಕೋಟ್ಯಂತ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿದೆ. ಇದು ಒಂದು ಇಲಾಖೆಯ ಉದಾಹರಣೆ. ಈಬಗ್ಗೆ ವಿರೋಧ ಪಕ್ಷದ ನಾಯಕರು ಮಾಹಿತಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.