
ಬೇಲೂರು: ಪರಿಶಿಷ್ಟಜಾತಿಯ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಸೋಮವಾರ ಬಲಗೈ ಸಮುದಾಯದವರು ರಸ್ತೆ ತಡೆ ನಡೆಸಿ, ಪ್ರತಿಭಟಿಸಿ, ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮುಖಂಡ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿಯಲ್ಲಿ ರಾಜ್ಯದ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಯಾವುದೇ ಕಾರಣಕ್ಕೂ ನಾಗಮೋಹನ್ ದಾಸ್ ಕೊಟ್ಟಿರುವ ಒಳ ಮೀಸಲಾತಿ ವರದಿಯನ್ನು ಜಾರಿಗೆ ತರಬಾರದು. ಇಲ್ಲಿ ಪ್ರವರ್ಗ ಎ,ಬಿ,ಸಿ ಎಂದು ವಿಂಗಡಿಸಿ ಬಲಗೈ ಸಮುದಾಯವನ್ನು ಕಡೆಗಣಿಸಲಾಗಿದೆ. ಇದರಿಂದ ಬಲಗೈ ಸಮುದಾಯದ ವಿದ್ಯಾವಂತ ಮಕ್ಕಳಿಗೆ ಅನ್ಯಾಯವಾಗಲಿದೆ. ನಾಗಮೋಹನ್ ದಾಸ್ ವರದಿಯನ್ನು ಕೈಬಿಟ್ಟು ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿ.ಟಿ.ಇಂದಿರಾ ಮಾತನಾಡಿ, ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಏಕ ಪಕ್ಷೀಯವಾಗಿ ವರದಿ ಕೊಟ್ಟಿರುವುದೇ ಇದಕ್ಕೆಲ್ಲ ಕಾರಣ. ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ವರದಿಯನ್ನು ಜಾರಿಗೆ ತಾರದೆ ಬಲಗೈ ಸಮಾಜಕ್ಕೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಪರ್ವತಯ್ಯ ಮಾತನಾಡಿ, ರಾಜ್ಯ ಸರ್ಕಾರ ಬಲಗೈ ಸಮುದಾಯಕ್ಕೆ ಇಷ್ಟೊಂದು ಅನ್ಯಾಯ ಮಾಡಿದರೂ ಸಹ ಸಂಪುಟದಲ್ಲಿರುವ ಬಲಗೈ ಸಮೂದಾಯದ ಸಚಿವರುಗಳು ಮಲಗಿದ್ದಾರ ಎಂದು ಪ್ರಶ್ನಿಸಿದರು.
ಮುಖಂಡರಾದ ಲತಾ ಮಂಜೇಶ್ವರಿ, ಸಿ.ಎನ್.ದಾನಿ, ಮಂಜುನಾಥ್, ಹೊಸಳ್ಳಿ ರಾಜು, ಹುಲಿಯಪ್ಪ, ವೆಂಕಟೇಶ್, ಬಿ.ಎಲ್.ಲಕ್ಷ್ಮಣ್, ಯೋಗೇಶ್, ರವಿ, ಬಾಬು, ರಾಕೆಶ್, ಶೇಷಪ್ಪ, ವಸಂತಕುಮಾರ್, ಜಗದೀಶ್, ಹರೀಶ್, ನಿಂಗರಾಜು, ರಮೆಶ್, ಕುಮಾರ್ ಕೌರಿ, ಮಂಜುನಾಥ್, ಚಂದ್ರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.