ADVERTISEMENT

ಹಾಸನ | ಎಚ್‌ಡಿಕೆಗೆ ಅಗೌರವ ಆರೋಪ: ಜೆಡಿಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 19:26 IST
Last Updated 19 ಅಕ್ಟೋಬರ್ 2025, 19:26 IST
ಹಾಸನದ ಹಾಸನಾಂಬ ದೇಗುಲದ ಪ್ರವೇಶ ದ್ವಾರದ ಬಳಿ ಜೆಡಿಎಸ್‌ ಮುಖಂಡರು ಭಾನುವಾರ ಪ್ರತಿಭಟನೆ ನಡೆಸಿದರು
ಹಾಸನದ ಹಾಸನಾಂಬ ದೇಗುಲದ ಪ್ರವೇಶ ದ್ವಾರದ ಬಳಿ ಜೆಡಿಎಸ್‌ ಮುಖಂಡರು ಭಾನುವಾರ ಪ್ರತಿಭಟನೆ ನಡೆಸಿದರು   

ಹಾಸನ: ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನಾಂಬ ದರ್ಶನಕ್ಕೆ ಬಂದಾಗ, ಜಿಲ್ಲಾಡಳಿತ ಅಗೌರವ ತೋರಿದೆ’ ಎಂದು ಆರೋಪಿಸಿ ಜೆಡಿಎಸ್ ಶಾಸಕರಾದ ಎ.ಮಂಜು, ಸ್ವರೂಪ್‌ ಪ್ರಕಾಶ್‌, ಪಕ್ಷದ ಮುಖಂಡರು, ಸದಸ್ಯರು ದೇವಸ್ಥಾನ ಮುಖ್ಯ ಪ್ರವೇಶ ದ್ವಾರದಲ್ಲಿ ಪ್ರತಿಭಟಿಸಿದರು. 

ಭಾನುವಾರ ಬೆಳಿಗ್ಗೆ 11.30ಕ್ಕೆ ಪ್ರಾರಂಭವಾದ ಪ್ರತಿಭಟನೆ ಮಧ್ಯಾಹ್ನದವರೆಗೂ ಮುಂದುವರಿದಿತ್ತು. ರಸ್ತೆಯಲ್ಲೇ ಟೆಂಟ್ ಹಾಕಿಕೊಂಡು ಕುಳಿತರು. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ದೇವಸ್ಥಾನ ಆಡಳಿತಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ 2.30ಕ್ಕೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ, ಶಾಸಕರು, ಜೆಡಿಎಸ್‌ ಮುಖಂಡರ ಜೊತೆ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಫೋನ್‌ನಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿವರಣೆ ನೀಡಿದರು.

ADVERTISEMENT

‘ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಕುಮಾರಸ್ವಾಮಿ ಅವರೂ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಗಿರುವ ಘಟನೆಯ ಕುರಿತು ಅವರಿಗೂ ವಿವರಿಸಿದ್ದೇನೆ’ ಎಂದು ಲತಾಕುಮಾರಿ ಹೇಳಿದರು.

ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಿಂದಾಗಿ ಕೆಲಕಾಲ ದರ್ಶನ ವ್ಯವಸ್ಥೆಯಲ್ಲೂ ಗೊಂದಲ ಉಂಟಾಗಿತ್ತು.

ವಿದೇಶ ಪ್ರವಾಸಕ್ಕೆ ಹೋಗುವ ಬದಲು ಶಾಸಕರು ನಗರದಲ್ಲಿದ್ದು ಜಾತ್ರೆಯನ್ನು ಮುನ್ನಡೆಸಿದ್ದರೆ ಇದು ಆಗುತ್ತಿರಲಿಲ್ಲ ಸ್ವರೂಪ್ ಪ್ರಕಾಶ್ ಅವರೇ ಕುಮಾರಸ್ವಾಮಿ ಕ್ಷಮೆ ಕೇಳಬೇಕು.
ಪ್ರೀತಂ ಜೆ.ಗೌಡ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ
‘ಶಿಷ್ಟಾಚಾರ ಲೋಪ: ತಲೆಕೆಡಿಸಿಕೊಳ್ಳಲ್ಲ’ 
‘ನಾನು ಶಿಷ್ಟಾಚಾರಕ್ಕೆ ಆದ್ಯತೆ ಕೊಡುವ ವ್ಯಕ್ತಿ ಅಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದೂ ಇಲ್ಲ. ನನಗೆ ದೇವಿಯ ದರ್ಶನ ಮುಖ್ಯ ದೇವಿಯ ದರ್ಶನ ಸಿಕ್ಕಿತು. ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಸಾರ್ವಜನಿಕರು ಕೂಡ ಯಾವುದೇ ತೊಂದರೆಗೆ ಒಳಗಾಗದೆ ನೆಮ್ಮದಿಯಾಗಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಶಿಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳಿಗೆ ತೊಂದರೆ. ಅವರಿಗೇಕೆ ತೊಂದರೆ ಕೊಡಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯದ ವೇಳೆ ಅಧಿಕಾರಿಗಳು ಹೊರಗೆ ಮಲಗುತ್ತಿದ್ದರು. ನನ್ನಿಂದ ಅವರಿಗೆ ತೊಂದರೆಯಾಗಿದೆ. ಈಗ ಶಿಷ್ಟಾಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಕುಮಾರಸ್ವಾಮಿ ಬೆಂಗಳೂರಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.