ADVERTISEMENT

ಹಾಸನ | ಕನ್ನಡಕ್ಕೆ ಕುವೆಂಪು ಅವರ ಕೊಡುಗೆ ಅಪಾರ: ಕೆ.ಎಸ್. ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:57 IST
Last Updated 6 ಜನವರಿ 2026, 2:57 IST
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆಯನ್ನು ಜಿಲ್ಲಾಧಿಕಾರಿ ಲತಾಕುಮಾರಿ ಉದ್ಘಾಟಿಸಿದರು.
ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆಯನ್ನು ಜಿಲ್ಲಾಧಿಕಾರಿ ಲತಾಕುಮಾರಿ ಉದ್ಘಾಟಿಸಿದರು.   

ಹಾಸನ: ಕನ್ನಡ ಸಾಹಿತ್ಯ ಮತ್ತು ಕನ್ನಡ ಭಾಷೆ ಇಷ್ಟು ಉತ್ತಂಗ ಸ್ಥಿತಿಗೆ ಏರಲು ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರಿದರು. ಜಾತಿ ಭೇದವಿಲ್ಲ, ಲಿಂಗ ಭೇದವಿಲ್ಲ, ಮೇಲು-ಕೀಳು  ಎಂಬ ಭಾವನೆಗಳಿಲ್ಲ. ಮನುಷ್ಯರೆಲ್ಲರೂ ಒಂದೇ. ನಾವು ಭಾರತೀಯರು. ಬೇರೊಂದು ದೇಶದ ಪ್ರಜೆ ಎಂಬ ಅಡೆ ತಡೆ ಇಲ್ಲ. ಎಲ್ಲರು ವಿಶ್ವಮಾನವರು ಎಂದು ಕುವೆಂಪು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ ಎಂದರು.

ADVERTISEMENT

ಅವರ ಮೊದಲ ಪ್ರೀತಿ, ಮೊದಲ ದೈವ ಕನ್ನಡವೇ ಆಗಿತ್ತು. ಅವರಿಗೆ ಕನ್ನಡವೇ ಉಸಿರಾಗಿತ್ತು ಎಂಬುದನ್ನು ನಾವು ಅವರ ಬರವಣಿಗೆ ಮೂಲಕ ತಿಳಿದುಕೊಳ್ಳಬಹುದು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕುವೆಂಪು ಅವರ ಪ್ರಮುಖ ಕಾದಂಬರಿಗಳಾಗಿದ್ದು, ಅವರು ನಮ್ಮ ನಾಡಿನ ಆಸ್ತಿ ಮಾತ್ರವಲ್ಲ, ಇಡೀ ಜಗತ್ತಿನ ಆಸ್ತಿ. ಪ್ರಾಪಂಚಿಕ ಜ್ಞಾನ ತಿಳಿಯಬೇಕೆಂದರೆ ಕನ್ನಡ ಸಾಹಿತ್ಯ ತುಂಬಾ ಮುಖ್ಯ. ವಿಶ್ವಮಾನವರ ಸಂದೇಶವನ್ನು ಪುಸ್ತಕದಲ್ಲಿ ಮಾತ್ರವಲ್ಲ ಅವರ ಜೀವನದಲ್ಲೂ ಕೂಡ ಅಳವಡಿಸಿಕೊಂಡಿದ್ದರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ಮಲ್ಲೇಶಗೌಡ ಮಾತನಾಡಿ, ಜಗತ್ತಿನಲ್ಲಿ ಅತಿ ದೊಡ್ಡ ಅಧ್ಯಯನಶೀಲರು ಕುವೆಂಪು. 9ನೇ ತರಗತಿ ಓದಿ ಮುಗಿಯುವುದರ ಜೊತೆಗೆ ಗ್ರಂಥಾಲಯದ ಅಷ್ಟೂ ಇಂಗ್ಲಿಷ್‌ ಪುಸ್ತಕಗಳನ್ನು ಓದಿ ಮುಗಿಸಿದ್ದರು ಎಂದರು.

ಕುವೆಂಪು ಅವರು ತಮ್ಮ ಹುಟ್ಟೂರಿನಲ್ಲಿ ಪರಿಸರವನ್ನು ನೋಡಿದ ರೀತಿ ಮತ್ತು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿದ ರೀತಿ ಅವರನ್ನು ಅಷ್ಟು ಎತ್ತರಕ್ಕೆ ತಲುಪಿಸಿತು. 35ನೇ ವಯಸ್ಸಿಗೆ ಅವರು ಬಹುತೇಕ ಕೃತಿಗಳನ್ನು ಬರೆದು ಮುಗಿಸಿದ್ದರು ಎಂದು ಅವರು, 20ನೇ ವಯಸ್ಸಿನಲ್ಲಿ ನಾಡಗೀತೆಯನ್ನು ರಚಿಸಿದ್ದಾರೆ. ನಾಡಗೀತೆಯಿಂದ ಒಂದು ಶಬ್ದವನ್ನು ತೆಗೆಯುವ ಶಕ್ತಿ ಯಾರಲ್ಲಿಯೂ ಇಲ್ಲ. ಗೀತೆಯಲ್ಲಿ ಕೊರತೆ ಇದೆ ಎಂದು ಶಬ್ದ ಸೇರಿಸುವ ಶಕ್ತಿ ಕೂಡ ಯಾರಿಗೂ ಇಲ್ಲ. ಇದು ಕುವೆಂಪು ಅವರ ಜ್ಞಾನದ ಸಂಕೇತವಾಗಿದೆ ಎಂದು ತಿಳಿಸಿದರು.

ಮೈಸೂರು ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ಬೆಟ್ಟೆಗೌಡ  ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ತಾರಾನಾಥ್, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬೊಮ್ಮೇಗೌಡ ಹಾಗೂ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.