
ಹಾಸನ: ‘ರಾಷ್ಟ್ರಕವಿ ಕುವೆಂಪು ಅವರು ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನೂ ಅದೇ ರೀತಿ ಮಕ್ಕಳ ಸಾಹಿತ್ಯವನ್ನು ಬರೆದು ಜಗದ ಕವಿ ಎನಿಸಿಕೊಂಡರು. ಮಾನವನ ಬದುಕಿಗೆ ಹೊಸ ಬೆಳಕು ನೀಡಿದ ಮಹಾಚಿಂತಕ ಕುವೆಂಪು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಹೇಳಿದರು.
ನಗರದ ಆದಿಚುಂಚನಗಿರಿ ಮಠದ ನವನಾಥ ಯಾಗ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ 136ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಕುವೆಂಪು ಸರಣಿ ಉಪನ್ಯಾಸ ನೀಡಿದರು.
ಜಗತ್ತಿನ ದುಃಖವನ್ನು ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದವರು ಕುವೆಂಪು. 10ನೇ ಶತಮಾನವನ್ನು ಪಂಪ ಯುಗ, 15ನೇ ಶತಮಾನವನ್ನು ಕುಮಾರ ಯುಗ, 12ನೇ ಶತಮಾನವನ್ನು ಬಸವ ಯುಗ ಮತ್ತು 21ನೇ ಶತಮಾನವನ್ನು ಕುವೆಂಪು ಯುಗ ಎಂದು ಕರೆಯುತ್ತೇವೆ. ರಾಮಾಯಣ ದರ್ಶನಂ ಎಂಬ ಮಹಾಕಾವ್ಯ ನಮನ್ನು ಸಾಕಷ್ಟು ಚಿಂತನೆಗೆ ದೂಡುತ್ತದೆ. ಕತ್ತಲೆಯಲ್ಲಿ ಇರುವವರಿಗೆ ಮಾತ್ರ ಚಂದ್ರನ ಮೌಲ್ಯ ತಿಳಿಯುವಂತೆ, ಸಮಾಜ ಸಂಕಷ್ಟದಲ್ಲಿರುವಾಗ ಕುವೆಂಪು ಚಿಂತನೆಯ ಮಹತ್ವ ಗೊತ್ತಾಗುತ್ತದೆ ಎಂದು ಹೇಳಿದರು.
ಭಾರತದಲ್ಲಿ ಯಾವುದೇ ಕವಿ, ಸಾಹಿತ್ಯ ರಚನೆ ಮಾಡುವಾಗ ಕುವೆಂಪು ಅವರ ಪ್ರೇರಣೆ ಅಂತರ್ಗತವಾಗಿ ಕೆಲಸ ಮಾಡುತ್ತದೆ. ಮಹಾಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ ಸೇರಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅಸಾಧಾರಣ ಎತ್ತರ ತಲುಪಿದವರು ಕುವೆಂಪು. 35ನೇ ವಯಸ್ಸಿಗೆ ಮಹಾಕಾವ್ಯ ರಚಿಸಿದ ಅವರು, 20ನೇ ವಯಸ್ಸಿನಲ್ಲಿ ನಾಡಗೀತೆಯನ್ನು ಬರೆದಿರುವುದು ಅಪರೂಪದ ಸಾಧನೆ ಎಂದರು.
ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮೂಖ್ಯರಲ್ಲ ಎಂಬುದೇ ಅವರ ಸಾಹಿತ್ಯದ ತಿರುಳು. ಲೋಕದಿಂದ ನಿಂದನೆಗೆ ಗುರಿಯಾದ ಕೈಕೇಯಿ ಮತ್ತು ಮಂಥರೆಯಂತಹ ಪಾತ್ರಗಳಲ್ಲೂ ಮಾನವೀಯತೆ ಮತ್ತು ಮಮತೆಯನ್ನು ಹುಡುಕಿದ ಕುವೆಂಪು, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮಹತ್ವವೆಂದು ಸಾರಿದ್ದಾರೆ ಎಂದರು.
ಹಾಸನದ ಆದಿಚುಂಚನಗಿರಿ ಮಠದಲ್ಲಿ ನಡೆದ 136 ಹುಣ್ಣಿಮೆ ಕಾರ್ಯಕ್ರಮಗಳು ವ್ಯರ್ಥವಾಗಿಲ್ಲ. ಅವುಗಳು ಅನೇಕ ಫಲಶ್ರುತಿಗಳನ್ನು ನೀಡಿವೆ. ನೌಕರರು, ಶಿಕ್ಷಕರು ಹಾಗೂ ಭಕ್ತರು ತಮ್ಮೊಳಗಿನ ಶಕ್ತಿಯನ್ನು ಗಟ್ಟಿಗೊಳಿಸಿಕೊಂಡಿದ್ದು, ಭಕ್ತರ ನಿರ್ಭಯತೆ ಮತ್ತು ನಿರ್ಮೋಹತೆ ಇದರಿಂದಲೇ ಬೆಳೆಯಲು ಸಾಧ್ಯವಾಯಿತು. ಈ ಎಲ್ಲಾ ಪರಿವರ್ತನೆಗೆ ಶಂಭುನಾಥ ಸ್ವಾಮೀಜಿಯವರೇ ಕಾರಣ ಎಂದು ಹೇಳಿದರು.
ರಾವಣನನ್ನು ಮಹಾಶಿಲ್ಪಿಯಾಗಿ ರೂಪಿಸಿದ ಕವಿ ಕುವೆಂಪುವಿನಂತೆ, ನಮನ್ನು ಮಾನವೀಯತೆಯ ಮೌಲ್ಯಗಳಲ್ಲಿ ರೂಪಿಸಿದವರು ಶಂಭುನಾಥ ಸ್ವಾಮೀಜಿ ಎಂದರು.
ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಠದ ವ್ಯವಸ್ಥಾಪಕ ಚಂದ್ರಶೇಖರ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.