ಚನ್ನರಾಯಪಟ್ಟಣ ತಾಲ್ಲೂಕು ಸಂತೆ ಶಿವರ ಗ್ರಾಮದ ಕೆರೆ ತುಂಬಿಸಲು ಕಾರಣಕರ್ತರಾದ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ನಾಗರಿಕ ಸನ್ಮಾನ ಏರ್ಪಡಿಸಿರುವ ಹಿನ್ನೆಲೆಯಲ್ಲಿ ಅದರ ಲಾಂಛನವನ್ನು ಶಾಸಕ ಸಿ.ಎನ್. ಬಾಲಕೃಷ್ಣ, ಜಿಲ್ಲಾಪಂಚಾಯಿತಿಮಾಜಿ ಸದಸ್ಯ ಎಂ.ಎ. ರಂಗಸ್ವಾಮಿ ಭಾನುವಾರ ಬಿಡುಗಡೆ ಮಾಡಿದರು.
ಚನ್ನರಾಯಪಟ್ಟಣ: ‘ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಹುಟ್ಟೂರು ಸಂತೆಶಿವರ ಗ್ರಾಮದಲ್ಲಿ ಫೆ.23ಕ್ಕೆ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ‘ನಾಡಿನ ಶ್ರೇಷ್ಠ ಸಾಹಿತಿಯಾಗಿ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಕೀರ್ತಿ ಭೈರಪ್ಪ ಅವರಿಗೆ ಸಲ್ಲುತ್ತದೆ. ಸಂತೆಶಿವರ, ಅಗ್ರಹಾರ ಬೆಳಗುಲಿ ಸೇರಿ ಮೂರು ಕೆರೆಗಳಿಗೆ ನೀರು ಹರಿಸುವುದರಿಂದ ಕುಡಿಯುವ ನೀರಿಗೆ ಪ್ರಯೋಜನವಾಗುತ್ತದೆ. ಇದರಿಂದ ಸುತ್ತಲಿನ 20ಕ್ಕೂ ಹಳ್ಳಿಗಳಿಗೆ ಅನುಕೂಲವಾಗುತ್ತದೆ ಎಂದು 4 ವರ್ಷದ ಹಿಂದೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಅದಕ್ಕೆ ಮಂಜೂರಾತಿ ದೊರಕಿತು. ನಂತರ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪಾತ್ರವೂ ಇದೆ’ ಎಂದರು.
‘ದ್ಯಾವಲಾಪುರ-ರಾಂಪುರದ ಗೇಟ್ ಬಳಿಯಿಂದ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್.ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಮನವಿ ಮಾಡಲಾಗಿದೆ. ಅವರೆಲ್ಲರೂ ಪಾಲ್ಗೊಳ್ಳುವರು’ ಎಂದು ತಿಳಿಸಿದರು.
ಮುಖಂಡ ಎಂ.ಎ. ರಂಗಸ್ವಾಮಿ ಮಾತನಾಡಿ,‘ಅವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತಾಗ ಸ್ವಂತ ಗ್ರಾಮ ಸಂತೆಶಿವರದಲ್ಲಿ 2011ರಲ್ಲಿ ಅದ್ದೂರಿಯಾಗಿ ಅಭಿನಂದನೆ ಏರ್ಪಡಿಸಲಾಗಿತ್ತು. ಅದೇ ರೀತಿ ಅವರಿಗೆ ಈ ಬಾರಿ ನಾಗರಿಕ ಸನ್ಮಾನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮತ್ತು ಸಂಸದ ಶ್ರೇಯಸ್ ಎಂ.ಪಟೇಲ್ ಭಾಗವಹಿಸುವರು’ ಎಂದು ತಿಳಿಸಿದರು.
ರಶ್ಮೀ ಮಾತನಾಡಿದರು. ಮುಖಂಡ ಎಸ್.ಎಲ್. ಕೃಷ್ಣಪ್ರಸಾದ್, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಗಂಗೇಗೌಡ, ಮುಖಂಡರಾದ ಅನಂತರಾಮು, ರಾಜಣ್ಣ, ಚಿರಂಜೀವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.