ADVERTISEMENT

ಹಾಸನ | ಬಿಡಾಡಿ ದನ, ಶ್ವಾನಗಳಿಗೂ ಪೌಷ್ಟಿಕ ಆಹಾರ

ಹಾಲು, ಮೊಸರು, ಮೊಟ್ಟೆ ಪೂರೈಕೆ: ಸಂಕಷ್ಟಕ್ಕೆ ಮಿಡಿದ ಯುವಕರ ಮನಸ್ಸುಗಳು

ಕೆ.ಎಸ್.ಸುನಿಲ್
Published 24 ಏಪ್ರಿಲ್ 2020, 19:45 IST
Last Updated 24 ಏಪ್ರಿಲ್ 2020, 19:45 IST
ಬೀದಿ ನಾಯಿಗಳಿಗೆ ಆಹಾರ ನೀಡಲಾಯಿತು (ಎಡಚಿತ್ರ). ದನಗಳಿಗೆ ತರಕಾರಿ ತಿನಿಸಿದರು
ಬೀದಿ ನಾಯಿಗಳಿಗೆ ಆಹಾರ ನೀಡಲಾಯಿತು (ಎಡಚಿತ್ರ). ದನಗಳಿಗೆ ತರಕಾರಿ ತಿನಿಸಿದರು   

ಹಾಸನ: ಲಾಕ್‌ಡೌನ್‌ ನಡುವೆ ಬಿಡಾಡಿ ದನಗಳು, ನಾಯಿಗಳು, ಕೋತಿಗಳು, ಪಕ್ಷಿಗಳ ಹಸಿವು ನೀಗಿಸುವ ಕೆಲಸವನ್ನು ಮಾಡುತ್ತಿದ್ದಾರೆ ನಗರದ ಪ್ರಾಣಿ ಪ್ರಿಯರು.

ಪ್ರಾಣಿಗಳಿಗೂ ಪೌಷ್ಟಿಕ ಆಹಾರ ಪೂರೈಸುವ ಮೂಲಕ ಸಮಾನ ಮನಸ್ಕರ ಯುವಕರು ಮಾನವೀಯತೆ ಮರೆಯುತ್ತಿದ್ದಾರೆ.

ಲಾಕ್‌ಡೌನ್‌ ಘೋಷಣೆ ಆದಾಗಿ ನಿಂದಲೂ ಹಾಸನದ ಮಣಿ, ಕಿರಣ್‌, ಯಶವಂತ್‌, ಸುದರ್ಶನ್‌ ಎಂಬುವರು ಎರಡು ಬೈಕ್‌ಗಳಲ್ಲಿ ಆಹಾರ ಪೊಟ್ಟಣ ತೆಗೆದುಕೊಂಡು ಬೀದಿ ನಾಯಿಗಳು, ಜಾನುವಾರುಗಳಿಗೆ ನೀಡುತ್ತಿದ್ದಾರೆ. ಇವರ ಕಾರ್ಯಕ್ಕೆ ಗ್ರೀನ್‌ ಫೌಂಡೇಷನ್‌ನ 15 ಜನರು ಸಹ ಸಹಕಾರ ನೀಡಿದ್ದಾರೆ.

ADVERTISEMENT

ಹಾಲು, ಮೊಟ್ಟೆ, ಮೊಸರು ಮಿಶ್ರಿತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹಾಸನ ನಗರದಲ್ಲಿ 500 ಹಾಗೂ ಪುರದಮ್ಮ ದೇವಸ್ಥಾನ ಬಳಿ 300 ಆಹಾರ ಪೊಟ್ಟಣ ನೀಡುವ ಮೂಲಕ ಪ್ರಾಣಿಗಳ ಹಸಿವು ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಗೆ, ಪಕ್ಷಿಗಳಿಗೆ ಬಿಸ್ಕೆಟ್‌ ಪುಡಿ, ಕಾಳು, ಅನ್ನದ ಅಗಳು ಹಾಗೂ ದನಗಳಿಗೆ ತರಕಾರಿ ನೀಡಲಾಗುತ್ತಿದೆ.

ಹಾಸನದ ಸಾಮಾಜಿಕ ಕಾರ್ಯಕರ್ತರಾದ ಉಮೇಶ್ ಅತ್ನಿ ಹಾಗೂ ಆರ್‌.ಜಿ.ಗಿರೀಶ್‌ ಅವರು ಬೈಕ್‌ನಲ್ಲಿ ಬಾಳೆ ಹಣ್ಣಿನ ಗೊನೆಗಳನ್ನು ತೆಗೆದುಕೊಂಡು ಹೋಗಿ, ಅರಸೀಕೆರೆ ಭಾಗದಲ್ಲಿ ಕೋತಿಗಳಿಗೆ ಹೊಟ್ಟೆ ತುಂಬುವಷ್ಟು ಬಾಳೆ ಹಣ್ಣು ಕೊಟಿದ್ದಾರೆ. ಉಳಿದ ಗೊನೆಗಳನ್ನು ಕೋತಿಗಳು ಹಸಿವಾದಾಗ ತಿನ್ನಲೆಂದು ರಸ್ತೆ ಬದಿಯ ಮರಕ್ಕೆ ತೂಗು ಹಾಕಿದ್ದಾರೆ.

ನಗರದ ಹೋಟೆಲ್‌, ಬೇಕರಿ, ಮಾಂಸ, ಕೋಳಿ, ಮೀನು ಅಂಗಡಿ, ತರಕಾರಿ ಅಂಗಡಿಗಳನ್ನು ಆಶ್ರಯಿಸಿ ಶ್ವಾನಗಳು ಬದುಕುತ್ತಿದ್ದವು. ತ್ಯಾಜ್ಯ ಗಳೊಂದಿಗೆ ದೊರೆಯುತ್ತಿದ್ದ ಆಹಾರ ಇವುಗಳಿಗೆ ಸಿಗುತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ಇವುಗಳಿಗೆ ಆಹಾರ ಸಮಸ್ಯೆ ತಲೆ ದೋರಿದೆ.

ಪ್ರಾಣಿಗಳ ಈ ದಯನೀಯ ಸ್ಥಿತಿ ಯನ್ನು ಕಂಡ ಮರುಗಿದ ಯುವಕರು, ತಾವು ಸಂಪಾದಿಸಿ, ಉಳಿಸಿದ ಹಣವನ್ನೇ ಸೇವಾ ಕಾರ್ಯಕ್ಕೆ ಬಳಸಿದ್ದಾರೆ.

‘ಲಾಕ್‌ಡೌನ್‌ನಿಂದ ಜನರು ಮಾತ್ರವಲ್ಲ ಪ್ರಾಣಿಗಳು ಸಂಕಷ್ಟದಲ್ಲಿವೆ. ಆಹಾರ ಇಲ್ಲದೆ ಪ್ರಾಣಿಗಳು ಸಾಯುವ ಸ್ಥಿತಿ ತಲುಪಬಹುದು. ಮನುಷ್ಯರ ಮೇಲೂ ದಾಳಿ ಮಾಡಬಹುದು. ಎಂಸಿಎಫ್‌ ಹಾಗೂ ಮೊಬೈಲ್‌ ಅಂಗಡಿ ಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರ ಜತೆ ಚರ್ಚಿಸಿ, ಪ್ರಾಣಿಗಳ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ನನ್ನ ಮನೆಯಲ್ಲಿಯೇ ಮೊಸರು, ಮೊಟ್ಟೆ, ಹಾಲು ಮಿಶ್ರಿತ ಆಹಾರ ತಯಾರಿಸಿ, ಬೀದಿ ನಾಯಿಗಳು, ಕೋತಿಗಳು, ದನಗಳಿಗೆ ನೀಡಲಾಗುತ್ತಿದೆ’ ಎಂದು ಸುದರ್ಶನ್‌ ಹೇಳಿದರು.

‘ಪುರದಮ್ಮ ದೇವಸ್ಥಾನ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಕಾಗೆ, ‍ಪಕ್ಷಿ ಹಾಗೂ ನಾಯಿಗಳು ಇವೆ. ಪಕ್ಷಿಗಳಿಗೆ ಬಿಸ್ಕೆಟ್‌ ಪುಡಿ ಮಾಡಿ, ಅನ್ನದ ಅಗಳು ಹಾಗೂ ಕಾಳು ಹಾಕಲಾಗುತ್ತಿದೆ. ನಿತ್ಯ ಎರಡು ಬೈಕ್‌ನಲ್ಲಿ ಬ್ಯಾಗ್‌ನಲ್ಲಿ ಆಹಾರ ಪೊಟ್ಟಣ ತೆಗೆದುಕೊಂಡು ಹೋಗಿ ನೀಡುತ್ತಿದ್ದೇವೆ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿ ದನಗಳಿಗೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.