ಹಾಸನ/ಸಕಲೇಶಪುರ: ಅಟ್ಟಾಡಿಸಿ ಕೊಂಡು ಬಂದ ಒಂಟಿ ಸಲಗದಿಂದ ತಪ್ಪಿಸಿಕೊಳ್ಳುವ ವೇಳೆ ಸಕಲೇಶಪುರ ತಾಲ್ಲೂಕಿನ ಕೊಣ್ಣೂರು ಗ್ರಾಮದ ದಿನೇಶ್ ಅವರ ಪುತ್ರ ಪುನಿತ್ ಕೆಳಗೆ ಬಿದ್ದು, ಬಲಗಾಲಿನ ಮೂಳೆ ಮುರಿದಿದೆ.
ಸೋಮವಾರ ಬೆಳಿಗ್ಗೆ 11.30ರ ಸಮಯದಲ್ಲಿ ಸುಳ್ಳಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಒಂಟಿ ಸಲಗ ಹಿಂಬದಿಯಿಂದ ಓಡಿಸಿಕೊಂಡು ಬಂದಿದೆ. ತಪ್ಪಿಸಿಕೊಳ್ಳುವ ವೇಳೆ ಎಡವಿ ಕೆಳಗೆ ಬಿದ್ದಿದ್ದಾರೆ. ಸ್ಥಳೀಯರು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
‘ಇತ್ತೀಚೆಗೆ ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ. ಅಲ್ಲದೇ ಆನೆ ವಾಚರ್ಸ್ ನೇಮಕ ಮಾಡಲಾಗಿದೆ. ಆದರೂ ಕಾಡಾನೆಗಳ ಚಲನವಲನ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹಗಲಿನಲ್ಲೇ ದಾಳಿ ಮಾಡುತ್ತಿದ್ದು, ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದೆ’ ಎಂದು ಪುನಿತ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.