
ಹೊಳೆನರಸೀಪುರ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಸೋಮವಾರ ಮಧ್ಯಾಹ್ನ ತಾಲ್ಲೂಕಿನ ತಟ್ಟೇಕೆರೆ ಬಾರೆ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಶಾಲೆಯಲ್ಲಿ ಪಾಠ ಹೇಗೆ ನಡೆಯುತ್ತಿದೆ ಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿದ್ದಾರಾ? ಊಟ ರುಚಿ ಆಗಿರುತ್ತದಾ ಎಂದು ವಿದ್ಯಾರ್ಥಿಗಳನ್ನು ಕೇಳಿದರು. ರುಚಿ ಆಗಿರುತ್ತದೆ ಎಂದು ವಿದ್ಯಾರ್ಥಿಗಳು ಉತ್ತರಿಸಿದ್ದು ಸರಿ ಹಾಗಾದರೆ ನಾನು ಇಲ್ಲೇ ಊಟ ಮಾಡುತ್ತೇನೆ ಎಂದು ಅಲ್ಲಿಯೇ ಇದ್ದ ಕುರ್ಚಿ ಮೇಲೆ ತಟ್ಟೆ ಹಿಡಿದು ಊಟಕ್ಕೆ ಕುಳಿತೇ ಬಿಟ್ಟರು.
ಅಡುಗೆಯವರು ವಿದ್ಯಾರ್ಥಿಗಳಿಗೆ ಮಾಡಿದ್ದ ಆಲೂಗಡ್ಡೆ ಮೂಲಂಗಿ ಜೊತೆ ಸೊಪ್ಪುಹಾಕಿ ಮಾಡಿದ ಸಾರಿನಲ್ಲಿ ಅನ್ನ ಊಟ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಕೂಡ ಸಚಿವರ ಜೊತೆ ಊಟ ಮಾಡಿದರೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನಾನು ಸೋಮವಾರದ ವ್ರತ ಮಾಡುತ್ತಿದ್ದೇನೆ ಎಂದು ಹೇಳಿ ಬಾಳೆಹಣ್ಣನ್ನು ಮಾತ್ರ ತಿಂದರು.
ಊಟದ ಜೊತೆ ಮೊಟ್ಟೆ ತಿನ್ನುವವರಿಗೆ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ನೀಡಲಾಗುತ್ತಿದ್ದು ಸಚಿವರು ಹಾಗೂ ಅಧಿಕಾರಿಗಳು ಬಾಳೆಹಣ್ಣು ತಿಂದರು. ಮುಖ್ಯಶಿಕ್ಷಕ ಮೋಹನ್ಕುಮಾರ್, ಸಹ ಶಿಕ್ಷಕರಾದ ಕಳಸೇಗೌಡ, ಭಾಸ್ಕರ್, ಸುಚಿತ್ರಾ ಇದ್ದರು. 8 ರಿಂದ 10 ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದು ಸಚಿವರ ಭೇಟಿ ಸಮಯದಲ್ಲಿ 45 ಮಕ್ಕಳು ಶಾಲೆಗೆ ಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.