ADVERTISEMENT

ಲೋಕಸಭೆ ಚುನಾವಣೆಗೆ ದೇವೇಗೌಡರೇ ಸ್ಪರ್ಧಿಸಲಿ: ಶಾಸಕ ಎ.ಮಂಜು

ಪಕ್ಷದ ಸಭೆಯಲ್ಲಿಯೇ ಒತ್ತಾಯ: ಶಾಸಕ ಎ.ಮಂಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 13:01 IST
Last Updated 20 ಅಕ್ಟೋಬರ್ 2023, 13:01 IST
ಎಚ್‌.ಡಿ ದೇವೇಗೌಡ
ಎಚ್‌.ಡಿ ದೇವೇಗೌಡ    

ಹಾಸನ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಇತ್ತೀಚಿಗೆ ನಡೆದ ಪಕ್ಷದ ಸಭೆಯಲ್ಲಿ ಒತ್ತಾಯ ಮಾಡಿದ್ದೇನೆ ಎಂದು ಶಾಸಕ ಎ. ಮಂಜು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕೊನೆಯ ಚುನಾವಣೆ ಹಾಸನದಿಂದಲೇ ಸ್ಪರ್ಧೆ ಮಾಡುವುದು ಸೂಕ್ತ.  ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದರು.

ರಾಜಣ್ಣ ಜಿಲ್ಲಾ ಮಂತ್ರಿ: ಜಿಲ್ಲಾ ಉಸ್ತುವಾರಿ ಸಚಿವರು ಹಾಸನ ಜಿಲ್ಲೆ ಕಡೆಗಣಿಸಿರುವ ವಿಚಾರವಾಗಿ ಮಾತನಾಡಿದ ಮಂಜು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಕೇವಲ ಒಂದು ತಾಲ್ಲೂಕಿನ ಮಂತ್ರಿಯಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಎಂದು ಹೇಳಲು ಬಯಸುತ್ತೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ತಾಲ್ಲೂಕಿನ ಜನಪ್ರತಿನಿಧಿಗಳು, ಶಾಸಕರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುವಂತೆ, ಎಲ್ಲ ತಾಲ್ಲೂಕನ್ನು ಸಮನಾಗಿ ಕಾಣುವಂತೆ ಮನವಿ ಮಾಡಿದ್ದು, ನಮ್ಮ ಸಹಕಾರವು ಇರಲಿದೆ ಎಂದು ತಿಳಿಸಿದ್ದೇನೆ ಎಂದರು.

ನಾಲೆಗಳಿಗೆ ನೀರು: ಹೇಮಾವತಿ ಜಲಾಶಯದಿಂದ ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ನೀರನ್ನು ಎಲ್ಲ ನಾಲೆಗಳಿಗೂ ಹರಿಸಲಾಗುವುದು. ಜಲಾಶಯದಲ್ಲಿ ಇರುವ ಹೆಚ್ಚುವರಿ ಮೂರು ಟಿಎಂಸಿ ನೀರನ್ನು ಕೆರೆಗಳಿಗೆ ಮಾತ್ರ ತುಂಬಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮುಂದಿನ ಮಾರ್ಚ್‌ವರೆಗೂ ಕುಡಿಯುವ ಉದ್ದೇಶಕ್ಕೆ ಅಗತ್ಯ ನೀರನ್ನು ಉಳಿಸಿಕೊಂಡು ಹೆಚ್ಚುವರಿ ನೀರನ್ನು ಕೆರೆ ತುಂಬಿಸಲಷ್ಟೇ ಬಳಸಲಾಗುತ್ತಿದೆ. ಈ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಂಜು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.