ಅರಸೀಕೆರೆ: ಕೋವಿಡ್–19 ಪೀಡಿತ ರಾಗಿ ಹೃದಯಾಘಾತದಿಂದ ನಿಧನರಾದ ಇಲ್ಲಿನ ನಗರಸಭೆ ಸದಸ್ಯ ಜಿ.ರಾಮು ಅವರ ಅಂತ್ಯಕ್ರಿಯೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪಿಪಿಇ ಕಿಟ್ ಧರಿಸಿ, ಮುಂಚೂಣಿ ಯಲ್ಲಿದ್ದು ಅಂತ್ಯಕ್ರಿಯೆ ನೆರವೇರಿಸಿದರು.
ಅವರ ಈ ನಡೆಗೆ ತಾಲ್ಲೂಕು ಆದಿಜಾಂಬವ ನೌಕರರ ಮಹಾಸಭಾದ ಗೌರವಾಧ್ಯಕ್ಷ ಎನ್.ಎಂ.ಶೇಖರಪ್ಪ ಮೆಚ್ಚುಗೆ ಸೂಚಿಸಿದ್ದಾರೆ.
ನಗರದ ಆದಿಜಾಂಬವ (ಸಿಂಧೂ ಭವನ) ಸಮುದಾಯ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಅರಸೀಕೆರೆ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಪರವಾಗಿ ಜಿ.ರಾಮು ಹೋರಾಟ ಮಾಡುತ್ತಿದ್ದರು. ಬಡತನದಲ್ಲಿ ಬೆಳೆದು ನಗರಸಭೆ ಸದಸ್ಯರಾದರು. ಶಾಸಕ ಶಿವಲಿಂಗೇಗೌಡ ಅವರು ಕೊರೊನಾ ಭೀತಿ ಲೆಕ್ಕಿಸದೆ ರಾಮು ಅವರ ಮೃತದೇಹವನ್ನು ಬರಮಾಡಿಕೊಂಡು ಮುಕ್ತಿಧಾಮದಲ್ಲಿ ಸ್ವತಃ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿರುವುದು ಶ್ಲಾಘನೀಯ. ಅವರು ಮಾನವೀಯತೆ, ಜಾತ್ಯತೀತ ಮನೋಭಾವವನ್ನು ಎತ್ತಿ ಹಿಡಿದಿದ್ದಾರೆ’ ಎಂದರು.
ಮಾದಿಗ ಸಮುದಾಯದ ವತಿಯಿಂದ ರಾಮು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ವತ್ಸಲಾ ಶೇಖರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಮೂರ್ತಿ ಗುತ್ತಿನಕೆರೆ ದಲಿತ ಮುಖಂಡರಾದ ಜಯಕುಮಾರ್, ವೆಂಕಟೇಶ್, ಶಿಕ್ಷಕರಾದ ನಿಂಗಪ್ಪ, ತಿಮ್ಮಪ್ಪ, ಆದಿಜಾಂಬವ ಮಹಾಸಭಾ ನೌಕರರ ಸಂಘದ ಪದಾಧಿಕಾರಿಗಳು, ನಿವೃತ್ತ ಶಿಕ್ಷಕ ಹನುಮಂತಪ್ಪ, ಮೈಲಾರಪ್ಪ, ಹೊಂಗಯ್ಯ, ರತ್ನಮ್ಮ, ವನಜಾಕ್ಷಮ್ಮ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.