
ಹಳೇಬೀಡು: ‘ರಸಗೊಬ್ಬರ ಪ್ರಭಾವದಿಂದ ಬರಡಾಗುತ್ತಿರುವ ಭೂಮಿಯನ್ನು ಸಂರಕ್ಷಿಸಲು ಸುಭಾಷ್ ಪಾಳೇಕರ್ ಸೂಚಿಸಿದ ನೈಸರ್ಗಿಕ ಕೃಷಿ ಅಗತ್ಯವಿದೆ. ಪುಷ್ಪಗಿರಿ ಮಠದ ಸಭಾಂಗಣದಲ್ಲಿ ಜನವರಿ 3ರಿಂದ 6ರವರೆಗೆ ಕಾರ್ಯಾಗಾರ ನಡೆಸಲಾಗುತ್ತಿದೆ’ ಎಂದು ಸೋಮಶೇಖರ ಶಿವಾಚಾರ್ಯರ ಸ್ವಾಮೀಜಿ ಹೇಳಿದರು.
ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಆವರಣದಲ್ಲಿ ಭಾನುವಾರ ನಡೆದ ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರದ ಪ್ರಚಾರ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ ಕಾರ್ಯಾಗಾರಕ್ಕೆ ರೈತರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ಹಳೆಯ ಕಾಲದ ಕೃಷಿ ಪದ್ಧತಿ ಅನುಸರಿಸುತ್ತಿದ್ದ ಪೂರ್ವಜರು, ರೈತ ಕುಟುಂಬ ನೆಮ್ಮದಿಯ ಜೀವನ ಕಂಡುಕೊಂಡಿತ್ತು. ಹೈಬ್ರಿಡ್ ವಿಧಾನ ಅಳವಡಿಸಿದ ಬಳಿಕ ಕೆಲವೇ ರೈತರು ಶ್ರೀಮಂತರಾದರು. ಶೇ 98 ರೈತರು ಸಾಲದ ಹೊರೆಯಲ್ಲಿ ಮುಳುಗಿದ್ದಾರೆ. ರೈತರ ಆತ್ಮಹತ್ಯೆ ಹೆಚ್ಚುತ್ತಿರುವುದು ವಿಷಾದನೀಯ ಎಂದು ಸ್ವಾಮೀಜಿ ಹೇಳಿದರು.
ಬಡವ, ಶ್ರೀಮಂತ ಜಾತಿ ವರ್ಣ ಭೇದ ಇಲ್ಲದೆ ರೈತರು ಒಗ್ಗಟ್ಟಿನಿಂದ ಕೃಷಿ ಕಾಯಕ ನಡೆಸಬೇಕು. ರೈತರ ಮಕ್ಕಳು ನಗರದತ್ತ ವಲಸೆ ಹೋಗುತ್ತಿದ್ದಾರೆ. ದೇಶದ ಆಹಾರ ಸ್ವಾವಲಂಬನೆ ಕಷ್ಟವಾಗುತ್ತದೆ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಕೃಷಿಗೆ ಬೇಡಿಕೆ ಬರಲಿದೆ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಜನರು ಮುಂದಾಗುತ್ತಾರೆ ಎಂದು ಸ್ವಾಮೀಜಿ ಹೇಳಿದರು.
ರೈತಸಂಘ ಹಳೇಬೀಡು ಹೋಬಳಿ ಸಾಮೂಹಿಕ ನಾಯಕ ಟಿ.ಬಿ.ಹಾಲಪ್ಪ, ಜಿಲ್ಲಾ ಮುಖಂಡರಾದ ಕಣಗಾಲ್ ಮೂರ್ತಿ, ಗ್ಯಾರಂಟಿ ರಾಮಣ್ಣ, ಸ್ಥಳೀಯ ಮುಖಂಡರಾದ ಎಲ್.ಈ.ಶಿವಪ್ಪ, ರುದ್ರೇಶ್, ಗಂಗಾಧರಪ್ಪ, ಪರಮೇಶ್, ಶ್ರೀನಿವಾಸ, ಶಿವಕುಮಾರ್, ಅಡುಗೆ ರಾಜು, ಮುನ್ನಾಭಾಯಿ, ಮಹೇಶ್ ಪಾಲ್ಗೊಂಡಿದ್ದರು.