ಹಳೇಬೀಡು: ಇಲ್ಲಿನ ನಾಡಕಚೇರಿ ಪಕ್ಕದಲ್ಲಿರುವ ಹಗ್ಗ, ರಾಟೆಯಿಂದ ನೀರು ತೆಗೆಯುವ ಬಾವಿಯಲ್ಲಿ ಕಸಕಡ್ಡಿ ತುಂಬಿದೆ. ಇದರಿಂದ ಬಾವಿಯಲ್ಲಿನ ಜಲದ ಕಣ್ಣು ಮುಚ್ಚಿಹೋಗಿದೆ.
ಬಾವಿಯಲ್ಲಿ ಕಸಕಡ್ಡಿ ತುಂಬಿ ಕೊಳೆಯುತ್ತಿರುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿದೆ. ಬಾವಿ ಯಿಂದ ದುರ್ವಾಸನೆಯೂ ಬರುತ್ತಿದ್ದು, ಗ್ರಂಥಾಲಯ ಹಾಗೂ ನಾಡಕಚೇರಿಗೆ ಬಂದವರಿಗೂ ತೊಂದರೆಯಾಗುತ್ತಿದೆ. ಬಾವಿಯ ಒಳಭಾಗದ ಒಂದು ಬದಿಯಲ್ಲಿ ಗಿಡಗಂಟಿ ಬೆಳೆಯುತ್ತಿದೆ. ಇದರಿಂದ ಬಾವಿಯ ಕಟ್ಟಡ ಸಡಿ ಲಗೊಳ್ಳುವ ಸಾಧ್ಯತೆ ಇದೆ ಎಂದು ರೈತ ಮುಖಂಡ ಕೆ.ಪಿ.ಕುಮಾರ್ ತಿಳಿಸಿದ್ದಾರೆ.
ಅಂಗಡಿಯವರು ಹೊರಗೆ ಇಟ್ಟಿರುವ ಹಾಗೂ ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯವನ್ನು ಬುದ್ಧಿಮಾಂದ್ಯ ವ್ಯಕ್ತಿಯೊಬ್ಬರು ಬಾವಿಗೆ ಸುರಿಯುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಪೂರೈಕೆ ಮಾಡಿದ ಬಾವಿಯ ಸುರಕ್ಷತೆಗೆ ಮುಂದಾಗಬೇಕು ಎಂದು ಸಲೂನ್ ಶಾಪ್ ಮಾಲೀಕ ಗಣೇಶ್ ವಿನಂತಿಸಿಕೊಂಡಿದ್ದಾರೆ.
ಶೀಘ್ರದಲ್ಲಿಯೇ ಬಾವಿಯನ್ನು ಪರಿಶೀಲಿಸಿ ಸ್ವಚ್ಛತೆಯ ಕೆಲಸ ಕೈಗೊಳ್ಳಲಾಗುವುದು. ಜನರು ಬಾವಿಗೆ ಕಸ ಹಾಕದಂತೆ ಜಾಲರಿ ಅಳವಡಿಸಲಾಗುವುದು ಎಂದು ಪಿಡಿಒ ರವಿಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.