ADVERTISEMENT

ಹಿರೀಸಾವೆ: ಹಳ್ಳಿಗಳಿಗೆ ಸರ್ಕಾರಿ ಬಸ್ ಬಂದು 6 ತಿಂಗಳಾಯ್ತು

ಜನರ ಪರದಾಟ | ಖಾಸಗಿ ವಾಹನ ಆಶ್ರಯಿಸಿರುವ ಗ್ರಾಮೀಣ ಜನ

ಹಿ.ಕೃ.ಚಂದ್ರು
Published 15 ಸೆಪ್ಟೆಂಬರ್ 2020, 7:34 IST
Last Updated 15 ಸೆಪ್ಟೆಂಬರ್ 2020, 7:34 IST
ಹಿರೀಸಾವೆಯಿಂದ ನಗರಗಳಿಗೆ ತೆರಳಲು ಹಳ್ಳಿಗಳಿಂದ ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿರುವ ಸಾರ್ವಜನಿಕರು
ಹಿರೀಸಾವೆಯಿಂದ ನಗರಗಳಿಗೆ ತೆರಳಲು ಹಳ್ಳಿಗಳಿಂದ ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿರುವ ಸಾರ್ವಜನಿಕರು   

ಹಿರೀಸಾವೆ (ಹಾಸನ ಜಿಲ್ಲೆ): ಆರು ತಿಂಗಳ ಹಿಂದೆ ನಿಲ್ಲಿಸಿದ್ದ ಗ್ರಾಮೀಣ ಬಸ್‌ಗಳ ಸೇವೆ ಇದುವರೆಗೆ ಪ್ರಾರಂಭವಾಗದೆ ಗ್ರಾಮೀಣ ಜನರು ನಗರಗಳಿಗೆ ಹೋಗಲು ಖಾಸಗಿ ವಾಹನಗಳನ್ನೇ ಆಶ್ರಯಿಸಿದ್ದಾರೆ.

ಹಿರೀಸಾವೆಯಿಂದ ದಿಡಗ, ಬಾಳಗಂಚಿ, ನುಗ್ಗೇಹಳ್ಳಿ, ಶ್ರವಣಬೆಳ ಗೊಳ, ಚನ್ನರಾಯಪಟ್ಟಣ ಮತ್ತು ಗಡಿ ಜಿಲ್ಲೆಗಳಾದ ಮಂಡ್ಯ ಜಿಲ್ಲೆಯ ಬಿಂಡಿಗನವಿಲೆ, ಸಂತೆಬಾಚಹಳ್ಳಿ, ತುಮಕೂರು ಜಿಲ್ಲೆಯ ತಿಪಟೂರು ಮತ್ತು ತುರುವೇಕೆರೆಯ ಹಳ್ಳಿ ಜನ ಕೆಎಸ್ಆರ್‌ಟಿಸಿಯ ಗ್ರಾಮೀಣ ಬಸ್‌ಗಳ ಮೂಲಕ ಹಿರೀಸಾವೆಗೆ ಬಂದು, ಬೆಂಗಳೂರು, ಹಾಸನ ಮತ್ತಿತರ ನಗರಗಳಿಗೆ ಪ್ರಯಾಣಿಸುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತು ನಗರ ಪ್ರದೇಶಗಳಿಗೆ ಬಸ್ ಸೌಲಭ್ಯ ಕಲ್ಪಿಸಿರುವ ಕೆಎಸ್ಆರ್‌ಟಿಸಿ ಹಳ್ಳಿಗಳಿಗೆ ಬಸ್‌ಗಳ ಸಂಚಾರ ಪ್ರಾರಂಭಿಸಿಲ್ಲ. ಕೋವಿಡ್–19 ಭಯದಿಂದ ಹಳ್ಳಿ ಜನ ಬಸ್‌ಗೆ ಬರುತ್ತಿಲ್ಲ, ನಷ್ಟದಲ್ಲಿ ಬಸ್‌ಗಳನ್ನು ಓಡಿಸಬೇಕಾಗುತ್ತದೆ. ಇದರಿಂದ ಇನ್ನೂ ಬಸ್ ಸೇವೆ ಪ್ರಾರಂಭವಾಗಿಲ್ಲ ಎಂದು ಇಲಾಖೆಯ ಸಿಬ್ಬಂದಿ ಹೇಳುತ್ತಾರೆ.

ADVERTISEMENT

ಈಗಾಗಲೇ ಪದವಿ ಮತ್ತಿತರ ತರಗತಿಯ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಳ್ಳಿಗಳಿಂದ ಬಸ್ ಇಲ್ಲದೆ, ಬೈಕ್, ಸ್ಕೂಟರ್ ಮತ್ತು ಆಟೊಗಳಲ್ಲಿ ಬಂದು ಪರೀಕ್ಷೆಗೆ ತೆರಳುತ್ತಿದ್ದಾರೆ. ಗ್ರಾಮೀಣ ಜನರಿಗೆ ಬಸ್ ಇಲ್ಲದೆ ಸಮಸ್ಯೆಯಾಗಿದೆ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಉದಯಕುಮಾರ್.

ಚನ್ನರಾಯಪಟ್ಟಣ ತಾಲ್ಲೂಕಿನ ಕೆಲವು ಹೋಬಳಿ ಕೇಂದ್ರಗಳ ಮೂಲಕ ಪ್ರಮುಖ ಹಳ್ಳಿಗಳಿಗೆ ಬಸ್ ಸಂಚಾರ ಪ್ರಾರಂಭ ಮಾಡಲಾಗಿದೆ. ಹಂತ, ಹಂತವಾಗಿ ಬಸ್ ಸೇವೆ ನೀಡಲಾ ಗುವುದು. ಆಕ್ಟೋಬರ್ ಮೊದಲ ವಾರದಲ್ಲಿ ಹಿರೀಸಾವೆ ಹೋಬಳಿ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶಕ್ಕೆ ಬಸ್ ಓಡಿಸಲಾಗುವುದು ಎಂದು ಚನ್ನರಾಯಪಟ್ಟಣ ಘಟಕದ ವ್ಯವಸ್ಥಾಪಕ ನಾಗರಾಜು ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.