ಬೇಲೂರಿನಲ್ಲಿ ಆಯೋಜಿಸಿದ್ದ ತಂಬಾಕು ರಹಿತ ದಿನಾಚರಣೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು
ಬೇಲೂರು: ದೇಶದಲ್ಲಿ ಅತಿ ಹೆಚ್ಚು ತಂಬಾಕು ಸೇವನೆ ಮಾಡುತ್ತಿರುವವರಲ್ಲಿ ವಿದ್ಯಾವಂತ ಯುವಕರೇ ಜಾಸ್ತಿ ಎಂದು ತಹಶೀಲ್ದಾರ್ ಎಂ. ಮಮತಾ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ನಿವೃತ್ತ ನೌಕರರ ಕಚೇರಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಸಮಿತಿ, ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದೆಲ್ಲೆಡೆ ತಂಬಾಕು ರಹಿತ ದಿನಾಚರಣೆ ಮಾಡಲಾಗುತ್ತಿದ್ದು, ಅದರಲ್ಲೂ ರೆಡ್ ಕ್ರಾಸ್ ಸಂಸ್ಥೆ ಆರೋಗ್ಯ ವಿಚಾರದಲ್ಲಿ ಜಾಗೃತಿ ಜಾಥಾ, ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ತಂಬಾಕು ಉತ್ಪನ್ನಗಳನ್ನು ಯುವ ಸಮುದಾಯವೇ ಹೆಚ್ಚಾಗಿ ಬಳಸುತ್ತಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಜೀವ ಹಾನಿ ಆಗಿರುವ ಪ್ರಕರಣಗಳು ನಡೆಯುತ್ತಿರುವುದು ಕಳವಳಕಾರಿ ಎಂದರು.
ತಂಬಾಕು ಉತ್ಪನ್ನಗಳ ಬಳಕೆಯನ್ನು ತಡೆಗಟ್ಟುವ ಕೆಲಸ ಕುಟುಂಬದಿಂದಲೇ ಆಗಬೇಕು. ತಂಬಾಕು ಉಪಯೋಗಿಸುವ ಪ್ರತಿಯೊಬ್ಬರು ಈ ಚಟ ಬಿಟ್ಟರೆ ಮುಂದಿನ ಜೀವನ ಆರೋಗ್ಯಕರವಾಗಿರುತ್ತದೆ ಎಂದು ತಿಳಿಸಿದರು.
ನಿವೃತ್ತ ತಹಶೀಲ್ದಾರ್ ಅಣ್ಣೇಗೌಡ ಮಾತನಾಡಿ, ತಂಬಾಕು ಸೇವನೆ ಜೀವನಕ್ಕೆ ಮಾರಕ. ಬೀಡಿ, ಸಿಗರೇಟ್, ಗುಟ್ಕಾ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ಹದಗೆಡುವುದಲ್ಲದೇ ನಿಮ್ಮನ್ನು ನಂಬಿರುವ ಕುಟುಂಬ ಕೂಡ ಬೀದಿಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಇದೇ ವೇಳೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ವೈ.ಎಸ್. ಸಿದ್ದೇಗೌಡ, ಶುಶ್ರೂಷಾಧಿಕಾರಿ ಎಚ್.ಎನ್. ವನಿತಾಮಣಿ, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಮೊಗಪ್ಪಗೌಡ, ಖಜಾಂಚಿ ಪದ್ಮೇಗೌಡ, ಮಮತಾ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.