ಅರಸೀಕೆರೆ: ದೇವಾಲಯದಲ್ಲಿ ಪೂಜೆ ಪ್ರಯುಕ್ತ ಏರ್ಪಡಿಸಿದ್ದ ಬಾಡೂಟಕ್ಕೆ ಕರೆದೊಯ್ಯಲಿಲ್ಲ ಎಂಬ ಕಾರಣದಿಂದ ತಾಲ್ಲೂಕಿನ ಪುರ್ಲೇಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದ ಜಗಳದಲ್ಲಿ ಗಾಯಗೊಂಡಿದ್ದ ಯುವಕ ಶರತ್ (28) ಸೋಮವಾರ ರಾತ್ರಿ ಮೃತಪಟ್ಟರು. ಕೊಲೆ ಆರೋಪದ ಮೇರೆಗೆ ಧನಪಾಲ್, ನಟರಾಜ್ ನಾಯ್ಕ್, ಮಂಜುನಾಥ್ ನಾಯ್ಕ್, ಜ್ಯೋತಿ ಎಂಬುವವರನ್ನು ಬಂಧಿಸಲಾಗಿದೆ.
ವಿವರ: ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಚೌಡೇಶ್ವರಿ ದೇವಾಲಯದಲ್ಲಿ ಏರ್ಪಡಿಸಿದ್ದ ಬಾಡೂಟಕ್ಕೆ ಕರೆದೊಯ್ಯಲಿಲ್ಲ ಎಂದು ಗ್ರಾಮದ ನಟರಾಜ್ ನಾಯ್ಕ್ ಹಾಗೂ ಇತರರು, ಶರತ್, ಯೋಗೀಶ್, ಮತ್ತು ರಾಕೇಶ್ ಅವರೊಂದಿಗೆ ಜಗಳವಾಡಿದ್ದರು. ಗ್ರಾಮಸ್ಥರು ಮಧ್ಯೆ ಪ್ರವೇಶಿಸಿ ಜಗಳ ಬಿಡಿಸಿದ್ದರು.
ನಂತರ ಆರೋಪಿ ನಟರಾಜ್ ಅದೇ ಗ್ರಾಮದ ಧನಪಾಲ್, ಮಂಜುನಾಥ್ ನಾಯ್ಕ್, ಧನಂಜಯ್ ನಾಯ್ಕ್, ಸರೋಜಾ ಬಾಯಿ, ಜ್ಯೋತಿ ಅವರೊಂದಿಗೆ ಸೇರಿ ಶರತ್ ಮತ್ತು ಯೋಗೀಶ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಶರತ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ‘ಬದುಕುಳಿಯುವ ಸಾಧ್ಯತೆ ಇಲ್ಲ’ ಎಂಬ ವೈದ್ಯರ ಅಭಿಪ್ರಾಯದ ಮೇರೆಗೆ ಅವರನ್ನು ಗ್ರಾಮಕ್ಕೆ ವಾಪಸ್ ಕರೆತರುವಾಗ ಮಾರ್ಗಮಧ್ಯೆ ಅವರು ಮೃತಪಟ್ಟರು. ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.