ಬೇಲೂರು: ತಾಲ್ಲೂಕಿನ ಕಂದವಾರ ಗ್ರಾಮದ ದೊಡ್ಡಕೆರೆಗೆ ಮರದ ತ್ಯಾಜ್ಯವನ್ನು ಹಾಕಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನ್ಕುಮಾರ್ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಮೋಹನ್ಕುಮಾರ್, ‘ಕಾಫಿ ತೋಟದಲ್ಲಿನ ಮರಗಳನ್ನು ಕಡಿದ ಬಳಿಕ ಅದರ ದೊಡ್ಡ- ದೊಡ್ಡ ಬೇರು, ದಿಮ್ಮೆ ಮತ್ತು ಇನ್ನಿತರ ವಸ್ತುಗಳನ್ನು ಕೆರೆಗೆ ಹಾಕಿದ್ದಾರೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದ್ದು, ಕೆಟ್ಟ ವಾಸನೆ ಬರುತ್ತಿದೆ. ಜಾನುವಾರುಗಳಿಗೆ ನೀರು ಕುಡಿಯಲು ಕಷ್ಟವಾಗುತ್ತಿದೆ ಎಂಬ ಗ್ರಾಮಸ್ಥರ ದೂರಿನನ್ವಯ ಬಂದು ಪರಿಶೀಲಿಸಿದ್ದೇನೆ. ಕೆರೆಗೆ ತ್ಯಾಜ್ಯ ಹಾಕಿದವರಿಗೆ ತೆರವು ಮಾಡಲು ಮೌಖಿಕವಾಗಿ ತಿಳಿಸಿದ್ದೇನೆ. ತೆರವು ಮಾಡದಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗು ವುದು’ ಎಂದು ಹೇಳಿದರು.
‘ಅಂತರ್ಜಲ ವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ಕೆರೆ, ಕಟ್ಟೆಗಳು ಅತಿ ಮುಖ್ಯವಾಗಿದ್ದು ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು’ ಎಂದರು.
ಗ್ರೇಡ್-2 ತಹಶೀಲ್ದಾರ್ ಅಶೋಕ್, ಗ್ರಾಮಸ್ಥ ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.