ಹಳೇಬೀಡು: ಜೆಡಿಎಸ್ನಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಸಾಗುತ್ತಿದ್ದೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಈಚೆಗೆ ನಿಧನರಾದ ಜೆಡಿಎಸ್ ಹಿರಿಯ ಮುಖಂಡ ಎಚ್.ಬಿ.ನಂಜುಂಡಪ್ಪ ಅವರ ಮನೆಗೆ ಗುರುವಾರ ರಾತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು. ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆದಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಎಲ್ಲ ಕಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.
ನಂಜುಂಡಪ್ಪನವರು ಜೆಡಿಎಸ್ ಪಕ್ಷಕ್ಕಾಗಿ ದೇವೇಗೌಡರ ಜೊತೆ ಸಮಕಾಲೀನರಾಗಿ ದುಡಿದಿದ್ದಾರೆ. ನಂಜುಂಡಪ್ಪ ಅವರಂತಹ ಹಿರಿಯರ ಅಶೀರ್ವಾದ ಜೆಡಿಎಸ್ಗೆ ದೊರಕಿದೆ. ಆರಂಭದಿಂದಲೂ ಜೆಡಿಎಸ್ನಲ್ಲಿಯೇ ದುಡಿದ ಹಿರಿಯ ಜೀವವನ್ನು ಕಳೆದುಕೊಂಡಿರುವುದು ದುಃಖದ ವಿಚಾರ ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ನಂಜುಡಪ್ಪನವರು ನಮ್ಮ ತಂದೆ ದಿವಂಗತ ಸೋಮಶೇಖರಪ್ಪ ಅವರೊಂದಿಗೆ ಜೆಡಿಎಸ್ ಪಕ್ಷವನ್ನು ಬೆಳೆಸಲು ಶ್ರಮಿಸಿದ್ದಾರೆ. ಎಂತಹ ಸಂದರ್ಭ ಬಂದರೂ ಜೀವನದ ಕೊನೆಯವರೆಗೂ ಜೆಡಿಎಸ್ನಲ್ಲಿ ದುಡಿದಿದ್ದಾರೆ ಎಂದರು.
ಲೋಕಸಭಾ ಚುನಾವಣೆಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಎರಡೂ ಪಕ್ಷದವರು ಪಾಲ್ಗೊಂಡಿದ್ದರು. ನಂಜುಡಪ್ಪ ಪುತ್ರರಾದ ಎಚ್.ಎನ್.ಬಸವರಾಜು, ಎಚ್.ಎನ್.ಉಮೇಶ್, ಮುಖಂಡರಾದ ಎಚ್.ಪರಮೇಶ್, ಈಶ್ವರ್, ಸಿ.ಆರ್.ಲಿಂಗಪ್ಪ, ಎಚ್.ಬಿ.ರಮೇಶ್, ಶಿವಲಿಂಗೇಗೌಡ, ಜಯಂತ್, ಎಚ್.ಸಿ.ಪ್ರವೀಣ್, ಎಚ್.ಬಿ.ಚಂದ್ರೇಗೌಡ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.