
ಹಾಸನದ ಹಿಮ್ಸ್ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನವನ್ನು ಶಾಸಕ ಸ್ವರೂಪ್ ಪ್ರಕಾಶ್, ಮಗುವಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು.
ಹಾಸನ: ‘ಪೋಲಿಯೊ ಮುಕ್ತ ಸಮಾಜ, ಆರೋಗ್ಯವಂತ ಸಮಾಜದ ಸೂಚಕ. ಜಿಲ್ಲೆಯಲ್ಲಿರುವ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮಗುವಿನ ಉಜ್ವಲ ಭವಿಷ್ಯ ರೂಪಿಸಿ’ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮನವಿ ಮಾಡಿದರು.
ಹಿಮ್ಸ್ ಆವರಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಪಲ್ಸ್ ಪೋಲಿಯೊ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಡಿ.21 ರಂದು ಪಲ್ಸ್ ಪೋಲಿಯೊ ಕಾರ್ಯಕ್ರಮದಡಿಯಲ್ಲಿ ‘ಎರಡು ಹನಿಗಳು- ಪೋಲಿಯೊ ವಿರುದ್ಧ ನಿರಂತರ ಗೆಲುವು’ ಎಂಬ ಘೋಷ ವಾಕ್ಯದೊಂದಿಗೆ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿದೆ. 5 ವರ್ಷದೊಳಗಿನ ಮಕ್ಕಳ ತಂದೆ– ತಾಯಿ ಮತ್ತು ಪೋಷಕರು ತಪ್ಪದೇ ಹತ್ತಿರದ ಪಲ್ಸ್ ಬೂತ್ಗಳಿಗೆ ಮಕ್ಕಳನ್ನು ಕರೆದುತಂದು ಲಸಿಕೆ ಹಾಕಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 5 ವರ್ಷದೊಳಗಿನ 1,06,747 ಮಕ್ಕಳಿಗೆ ಲಸಿಕೆ ಹಾಕುವ ಮತ್ತು 4,68,493 ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಇಂದು ನಗರ ಪ್ರದೇಶದಲ್ಲಿ 140 ಮತ್ತು ಗ್ರಾಮೀಣ ಪ್ರದೇಶದಲ್ಲಿ 732 ಸೇರಿದಂತೆ ಒಟ್ಟು 872 ಬೂತ್ಗಳಲ್ಲಿ ಲಸಿಕೆ ಹಾಕಲಾಗಿದೆ. ಎರಡನೇ ದಿನದಿಂದ ಒಂದು ತಂಡದಲ್ಲಿ 2 ಸದಸ್ಯರಂತೆ 1,744 ತಂಡಗಳು ಮನೆ ಮನೆಗೆ ಭೇಟಿ ಮಾಡಲಿದ್ದು, 5 ಬೂತ್ಗಳಿಗೆ ಒಬ್ಬರಂತೆ 174 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.
ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 3 ದಿನ ಹಾಗೂ ನಗರ ಪ್ರದೇಶದಲ್ಲಿ 4 ದಿನಗಳು ಮನೆ ಭೇಟಿ ಮಾಡುವ ಮೂಲಕ ಲಸಿಕೆ ಪಡೆಯಲು ಬಿಟ್ಟುಹೋದ ಮಕ್ಕಳಿಗೂ ಲಸಿಕೆ ಹಾಕಲಾಗುತ್ತದೆ ಎಂದರು.
ಜಿಲ್ಲೆಯ 8 ತಾಲ್ಲೂಕಿನಲ್ಲಿ ವಿಶೇಷವಾಗಿ ಒಟ್ಟು 7 ಸಂಚಾರಿ ತಂಡ ಮತ್ತು ಒಟ್ಟು 22 ಟ್ರಾನ್ಸಿಟ್ ಪಾಯಿಂಟ್ ಬೂತ್ಗಳನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೇವಸ್ಥಾನ, ರಿಂಗ್ ರಸ್ತೆ, ಟೋಲ್ಗೇಟ್ಗಳಲ್ಲಿ ಸ್ಥಾಪಿಸಲಾಗಿದ್ದು, 5 ವರ್ಷದ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲಾಗುವುದು. ಆರೋಗ್ಯ ಇಲಾಖೆಯಿಂದ ಮೇಲ್ವಿಚಾರಣೆ ನಡೆಸಲು ಎಲ್ಲ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗಪ್ಪ, ಡಾ. ಚನ್ನವೀರಪ್ಪ, ಡಾ. ಶಿವಶಂಕರ್, ಡಾ. ಮನುಪ್ರಕಾಶ್, ಮತ್ತಿತರರು ಹಾಜರಿದ್ದರು.
ಪೋಲಿಯೊ ಲಸಿಕೆಯನ್ನು 1995 ರಿಂದ ಹಾಕಲಾಗುತ್ತಿದೆ. 2014 ರಲ್ಲಿ ಪೋಲಿಯೊ ಮುಕ್ತ ಭಾರತ ಎಂದು ಘೋಷಿಸಲಾಗಿದೆ. ಪ್ರಸ್ತುತ ಅಫ್ಗಾನಿಸ್ತಾನ್ ಪಾಕಿಸ್ತಾನದಲ್ಲಿ ಮಾತ್ರ ಪೋಲಿಯೊ ಪ್ರಕರಣಗಳಿವೆ.ಡಾ. ದಿನೇಶ್ ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ
‘ಅಭಿಯಾನ ಯಶಸ್ವಿಗೊಳಿಸಿ’
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೋಲಿಯೊ ಲಸಿಕೆ ಬಹಳ ಮುಖ್ಯ. 5 ವರ್ಷದೊಳಗಿನ ಮಕ್ಕಳಿಗೆ ತಾಯಂದಿರು ತಪ್ಪದೆ ಲಸಿಕೆ ಹಾಕಿಸುವ ಮೂಲಕ ಅಭಿಯಾನ ಯಶಸ್ವಿಗೊಳಿಸುವಂತೆ ಶಾಸಕ ಸ್ವರೂಪ್ ಪ್ರಕಾಶ್ ಮನವಿ ಮಾಡಿದರು. ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಲಸಿಕೆ ಹಾಕಿಸಬೇಕು. ವೈದ್ಯರ ಹೇಳಿಕೆಯಂತೆ ಮಗುವಿಗೆ ಕೆಮ್ಮು ಶೀತ ಜ್ವರ ಇದ್ದರೂ ಲಸಿಕೆ ಹಾಕಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.