
ಹಳೇಬೀಡು: ನವೆಂಬರ್ 20 ಹಾಗೂ 21ರಂದು ಪುಷ್ಪಗಿರಿ ಕ್ಷೇತ್ರದಲ್ಲಿ ಕಾರ್ತಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪುಷ್ಪಗಿರಿ ಮಠದಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನ. 20ರ ಸಂಜೆಯಿಂದ ಕ್ಷೇತ್ರದಲ್ಲಿ ಪೂಜಾ ವಿಧಾನ ಆರಂಭವಾಗುತ್ತದೆ. ಮಲ್ಲಿಕಾರ್ಜನ ಸ್ವಾಮಿ ಹಾಗೂ ಪಾರ್ವತಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶತರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯುತ್ತದೆ. ಎರಡೂ ಗುಡಿಯಲ್ಲಿಯೂ ಮೊಗ್ಗಿನ ಪೂಜೆ ನೆರವೇರುತ್ತದೆ. ನಂತರ ರಾತ್ರಿಯಿಡಿ ವಿವಿಧ ಉತ್ಸವಗಳು ನಡೆಯುತ್ತವೆ. ನ.21 ರಂದು ಮುಂಜಾನೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಎಣ್ಣೆ ಶಾಲೆ ಉತ್ಸವ ನಡೆಯುತ್ತದೆ.
ಪುಷ್ಪಗಿರಿ ಮಠದಲ್ಲಿ ನ.20ರ ರಾತ್ರಿ ಶ್ರೀಗುರು ಕರಿಬಸವ ಅಜ್ಜಯ್ಯ ಮಂದಿರ, 108 ಶಿವಲಿಂಗ ಮಂದಿರ ಹಾಗೂ ಮಠದ ಆವರಣದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಸಹಸ್ರಾರು ಭಕ್ತರು ದೀಪ ಬೆಳಗಿಸಿ, ಭಕ್ತಿ ಸಮರ್ಪಿಸುತ್ತಾರೆ. ಆದಿಯೋಗಿ ಶಿವನ ಮೂರ್ತಿಗೆ ಗಂಗಾರತಿ ನೆರವೇರಿಸಲಾಗುತ್ತದೆ.
ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾವಿದರಿಂದ ಜಾನಪದ, ಶಾಸ್ತ್ರೀಯ ಸಂಗೀತ ನೃತ್ಯ ಕಾರ್ಯಕ್ರಮ ನಡೆಯುತ್ತದೆ. ಕಲಾವಿದ ಕುಮಾರ್ ಚಂದನ್ ತಂಡದವರು ವಚನ ಗಾಯನ ಪ್ರಸ್ತುತ ಪಡಿಸುವರು ಎಂದು ಸ್ವಾಮೀಜಿ ಹೇಳಿದರು.
ಧಾರ್ಮಿಕ ಸಭೆಯಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೆಂದ್ರ, ಶಾಸಕ ಎಚ್.ಕೆ.ಸುರೇಶ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಪುಷ್ಪಗಿರಿ ಜಾತ್ರೆ ನಾಡಿನ ಪ್ರಮುಖ ಉತ್ಸವಗಳಲ್ಲಿ ಒಂದಾಗಿದ್ದು, ದೂರದ ಊರುಗಳಿಂದ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.