ಹಾಸನ: ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಒಂದು ತಾಸು ಗುಡುಗುಸಹಿತ ಉತ್ತಮ ಮಳೆ ಸುರಿಯಿತು.
ಹಾಸನ ಸುತ್ತಮುತ್ತಲಿನ ಪ್ರದೇಶ, ಆಲೂರು, ಅರಕಲಗೂಡು, ಸಕಲೇಶಪುರ ತಾಲ್ಲೂಕಿನಲ್ಲಿ ಜೋರಾಗಿ ಮಳೆ ಸುರಿಯಿತು. ಮಳೆಯಿಂದ ನಗರ ರಸ್ತೆಗಳು ಜಲಾವೃತ ಗೊಂಡು ಸಂಚಾರಕ್ಕೆ ಅಡಚಣೆ ಯಾಯಿತು.
ಮಧ್ಯಾಹ್ನ ಮೋಡ ಕವಿದ ವಾತಾವರಣವಿತ್ತು. 3.30 ರಿಂದ 4.30ರವರೆಗೆ ಗಾಳಿ ಸಹಿತಮಳೆ ಸುರಿಯಿತು.ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಯಿತು.
ಅರಕಲಗೂಡು ಪಟ್ಟಣದಲ್ಲಿ ಮಧ್ಯಾಹ್ನ ಕೆಲಕಾಲ ಗುಡುಗಿನಿಂದ ಕೂಡಿದ ಮಳೆ ಸುರಿಯಿತು. ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆಯಿತು.
ಹದ ಮಳೆ
ಆಲೂರು: ಯುಗಾದಿ ಹಬ್ಬ ಮರುದಿನ ಹದ ಮಳೆಯಾಗಿರುವುದು ರೈತರು ಮತ್ತು ಜನಸಾಮಾನ್ಯರಲ್ಲಿ ಸಂತಸ ಮೂಡಿಸಿದ್ದು, ವಾತಾವರಣ ತಂಪಾಗಿಸಿತು.
ಬಹುತೇಕ ರೈತರು ಶುಂಠಿ ಬೆಳೆ ನಾಟಿ ಮಾಡಿ ಕೊಳವೆಬಾವಿ ಮೂಲಕ ನೀರು ಸಿಂಪರಣೆ ಮಾಡುತ್ತಿದ್ದರು. ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಹಲವಾರು ಕೊಳವೆಬಾವಿಗಳು ಬತ್ತಿದ್ದವು. ಇಂದು ಸುರಿದ ಮಳೆ ಸ್ವಲ್ಪ ಆಸರೆ ನೀಡಿತು.
ಸಾಧಾರಣ ಮಳೆ
ಹೆತ್ತೂರು: ಹೆತ್ತೂರು ಹಾಗೂ ಯಸಳೂರು ಹೋಬಳಿಯ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಭಾರಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಸುರಿಯಿತು
ಬಿರು ಬಿಸಿಲಿನಿಂದ ಕಾಫಿ, ಕಾಳು ಮೆಣಸು ಬೆಳೆಗಳು ಒಣಗಲಾರಂಭಿ ಸಿದ್ದವು, ಮಳೆ ಸುರಿದಿರುವುದರಿಂದ ಬೆಳೆಗಳಿಗೆ ಅನುಕೂಲವಾಗಿದೆ. ಚಿನ್ನಹಳ್ಳಿ, ಹೊಸಹಳ್ಳಿ, ಮಂಕನಹಳ್ಳಿ, ಅತ್ತಿಹಳ್ಳಿ, ಯಡಕೇರಿ ಇನ್ನಿತರ ಪ್ರದೇಶ ಗಳಲ್ಲಿ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.