
ಅರಕಲಗೂಡು: ಧಾರ್ಮಿಕ ಕಾರ್ಯಗಳು ಮನುಷ್ಯನ ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ಗ್ರಾಮದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಶುಕ್ರವಾರ ಮಂಜುನಾಥಸ್ವಾಮಿ ಧರ್ಮಸ್ಥಳ ಪಾದಯಾತ್ರಾ ಸಮಿತಿ ಹಾಗೂ ಮಂಜು ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶೀತಗಾಳಿ, ಕೊರೆಯುವ ಚಳಿ ಹೆಚ್ಚಾಗಿರುವುದರಿಂದ ಯಾತ್ರಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಮೂರು ದಿನ ಯಾತ್ರಿಗಳು ಬೆಚ್ಚನೆಯ ಉಡುಪು ಹಾಗೂ ಪರಿಕರಗಳನ್ನು ಬಳಸಿಕೊಳ್ಳಬೇಕು, ಪಾದಯಾತ್ರೆಯನ್ನು ಹಗಲು ಹಾಗೂ ಮಧ್ಯಾಹ್ನ ಸಮಯದಲ್ಲೇ ಕೈಗೊಳ್ಳುವುದು ಸೂಕ್ತ. ರಾತ್ರಿ ಸಮಯದಲ್ಲಿ ಪಾದಯಾತ್ರೆ ನಡೆಸಬಾರದು. ವಾಹನ ದಟ್ಟಣೆ ಹಾಗೂ ಕತ್ತಲು ನಡುವೆ ಯಾತ್ರೆ ಕೈಗೊಂಡರೆ ಅನಾಹುತಗಳ ಸಂಭವ ಹೆಚ್ಚಿರುವುದರಿಂದ ಯಾತ್ರಿಗಳು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸಲಹೆ ಮಾಡಿದರು.
ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಸತೀಶ್ , ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜ್, ರೈತ ಕಲ್ಯಾಣ ಸಂಘದ ಕಾರ್ಯಾಧ್ಯಕ್ಷ ಲೋಕೇಶ್, ಪಾದಯಾತ್ರೆ ಸಮಿತಿ ಗೌರವಾಧ್ಯಕ್ಷ ವೆಂಕಟೇಶ್ ಅಧ್ಯಕ್ಷ ಅನಂದ್ ,ಸದಸ್ಯರಾದ ಅಶೋಕ್, ರವಿಕುಮಾರ್, ಎ.ಎಂ. ರಘು, ಗಣೇಶ್ ಬಾಣದಹಳ್ಳಿ, ಕಾಕೋಡನಹಳ್ಳಿ ಮಂಜು, ಕಾರ್ತಿಕ್ ಅರಸ್, ಶಿವು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.