ಹಾಸನ: ‘ಡಿಸೆಂಬರ್ನೊಳಗೆ ಬಡಾವಣೆ ನಿರ್ಮಿಸಿ ಎಲ್ಲಾ ಸರ್ಕಾರಿ ನೌಕರರಿಗೆ ಮಾರುಕಟ್ಟೆ ದರಕ್ಕಿಂತ ಶೇ 30ರಿಂದ 40ರಷ್ಟು ಕಡಿಮೆ ದರಕ್ಕೆ ನಿವೇಶನ ಹಂಚಿಕೆ ಮಾಡಲಾಗುವುದು’ ಎಂದು ಶಾಸಕ ಪ್ರೀತಂ ಜೆ. ಗೌಡ ಭರವಸೆ ನೀಡಿದರು.
ನಗರದ ಮಹಾವೀರ ವೃತ್ತದ ಬಳಿ ಇರುವ ಗುರುಭವನದಲ್ಲಿ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಜಿಲ್ಲಾ ಮತ್ತು ರಾಜ್ಯ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಹಾಸನ ನಗರ ವೇಗವಾಗಿ ಬೆಳೆಯುತ್ತಿದೆ. ನಗರದಲ್ಲಿ ಒಂದು ನಿವೇಶನ ಕೊಳ್ಳುವುದು ಕಷ್ಟದ ವಿಷಯ. ಹಾಗಾಗಿ ಈ ಹಿಂದೆ ಕೆಎಸ್ಆರ್ಟಿಸಿ ನೌಕರರಿಗೆ ನಿವೇಶನ ನಿರ್ಮಿಸಿಕೊಟ್ಟಂತೆ ಎಲ್ಲಾ ಸರ್ಕಾರಿ ನೌಕರರಿಗೆ ಬಡಾವಣೆ ನಿರ್ಮಿಸಲಾಗುವುದು’ ಎಂದರು.
‘ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಬಹಳ ಮುಖ್ಯ. ಎಷ್ಟೋ ಸಂದರ್ಭದಲ್ಲಿ ಮಹಿಳೆ ಇತರರಿಗಾಗಿ ದುಡಿಯುತ್ತಾ ತಮ್ಮ ಆರೋಗ್ಯದ ಕಡೆಗೆ ಗಮನವನ್ನೇ ನೀಡುವುದಿಲ್ಲ. ಹಾಗಾಗಿ ಮಹಿಳೆಯರ ಆರೋಗ್ಯ ಹಿತ ದೃಷ್ಟಿಯಿಂದ ಆರೋಗ್ಯ ಮೇಳ ನಡೆಸಲಾಗುವುದು’ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ಲೇಖಕಿ ಶೈಲಜಾ ಹಾಸನ್, ಸರ್ಕಾರಿ ಕಲಾ ಕಾಲೇಜು ಇತಿಹಾಸ ಸಹ ಪ್ರಾಧ್ಯಾಪಕಿ ಎಚ್.ಎಸ್. ವಿದ್ಯಾ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಂಟಿ ಕಾರ್ಯದರ್ಶಿ ಎಚ್.ಜಿ. ಕಾಂಚನಮಾಲಾ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್. ರಾಜಶೇಖರಪ್ಪ, ತಾಲ್ಲೂಕು ಅಧ್ಯಕ್ಷೆ ಡಿ.ಎನ್. ದಾಕ್ಷಾಯಿಣಿ, ಉಪಾಧ್ಯಕ್ಷ ಆರ್.ಸಿ. ಭೈರಪ್ಪ, ರಾಜ್ಯ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಎಚ್.ಆರ್. ಯಶೋಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.