ADVERTISEMENT

ಸಕಲೇಶಪುರ: ಸ್ವಯಂಕೃತ ಅಪರಾಧಕ್ಕೆ ಬೇಕಿದೆ ಕಡಿವಾಣ

ಕಾಡಿಗೆ ಮನುಷ್ಯನ ಅತಿಕ್ರಮ ಪ್ರವೇಶ: ತ್ಯಾಜ್ಯ ದಿಂದ ಬೆಂಕಿ ಅನಾಹುತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 6:40 IST
Last Updated 23 ಫೆಬ್ರುವರಿ 2023, 6:40 IST
ಶಿಲ್ಪಾ
ಶಿಲ್ಪಾ   

ಸಕಲೇಶಪುರ: ಕಾಡ್ದಿಚ್ಚಿ ನಂದಿಸಲು ಹೋಗಿ ಬೆಂಕಿಯ ಬಲೆಗೆ ಸಿಕ್ಕಿ ಅನ್ಯಾಯವಾಗಿ ಅರಣ್ಯ ಇಲಾಖೆಯ ಗಾರ್ಡ್‌ ಒಬ್ಬರು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಇಂತಹ ಸಂದರ್ಭದಲ್ಲಿ ಕಾಡಿಗೆ ಬೆಂಕಿ ಇಟ್ಟವರು ಯಾರು ಎನ್ನುವ ಪ್ರಶ್ನೆ ಇಲ್ಲಿನ ನಾಗರಿಕರನ್ನು ಕಾಡುತ್ತಿದೆ.

ಪಶ್ಚಿಮ ಘಟ್ಟಗಳಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಈ ದುರ್ಘಟನೆ ಸಾಕ್ಷೀಕರಿಸುತ್ತದೆ. ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯ ಕಣ್ತುಂಬಿಸಿಕೊಳ್ಳುವುದಕ್ಕೆ, ಇದರ ಬಗ್ಗೆ ಹೆಚ್ಚು ಅಧ್ಯಯನ ನಡೆಸುವುದಕ್ಕೆ, ಇದರ ಸಂರಕ್ಷಣೆಗಾಗಿ ಚಿಂತನೆ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ.

ಟ್ರಕ್ಕಿಂಗ್ ಹೆಸರಲ್ಲಿ ಪಶ್ಚಿಮ ಘಟ್ಟದೊಳಗೆ ಅರಣ್ಯ ಸಂರಕ್ಷಣೆ, ವನ್ಯಜೀವಿ ಕಾಯ್ದೆಗಳನ್ನೆಲ್ಲ ಧಿಕ್ಕರಿಸಿ, ಮೋಜು ಮಸ್ತಿ ಮಾಡಲು ಬರುವವರ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ ಬೆಂಗಳೂರು ಹಾಗೂ ಇನ್ನಿತರ ಪ್ರದೇಶಗಳಿಂದ ಸಾಲು ಸಾಲು ಪ್ರವಾಸಿಗರು ಬರುತ್ತಾರೆ. ಬರುವ ಕೆಲವರು ಇಲ್ಲಿಯ ಪ್ರಕೃತಿ ಸೌಂದರ್ಯ ನೋಡಿ ಆನಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ADVERTISEMENT

ಆದರೆ ಕೆಲವರು ಕಾಡು, ಶೋಲಾ ಗುಡ್ಡಗಳಿಗೆ ಕಾನೂನು ಬಾಹಿರವಾಗಿ ಅತಿಕ್ರಮ ಪ್ರವೇಶ ಮಾಡುತ್ತಾರೆ. ಅಲ್ಲಿ ಧೂಮಪಾನ, ಮದ್ಯಪಾನ ಮಾಡುವುದು. ಧೂಮಪಾನ ಮಾಡಿದ ಸಿಗರೇ್ಟ್, ಬೀಡಿ, ಬೆಂಕಿ ಪೊಟ್ಟಣ ಹಾಗೂ ಬೆಂಕಿ ಪಟ್ಟಣದ ಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಕೆಲವರಂತೂ ಕಾಡಿನ ಸೌದೆ ಬಳಸಿ, ಅಲ್ಲಿಯೇ ಅಡುಗೆ ಮಾಡಿಕೊಂಡು, ಪಾರ್ಟಿ ಕೂಡ ಮಾಡುತ್ತಾರೆ. ಅರ್ಧ ಉರಿದು ಹೋದ ಸೌದೆಗಳನ್ನು ಹಾಗೆಯೇ ಬಿಟ್ಟು ಬರುತ್ತಾರೆ ಎಂಬ ಆರೋಪ ಸಾರ್ವಜನಿಕರದ್ದು.

ಸ್ವಯಂಕೃತ ಅಪರಾಧ: ಕಡ್ಡಿ ಗೀಚಿ ಬೆಂಕಿ ಹತ್ತಿಸಲೇ ಬೇಕಾಗಿಲ್ಲ. ಬೆಂಕಿ ಕಡ್ಡಿ ಹಾಗೂ ಪೊಟ್ಟಣದಲ್ಲಿ ರಂಜಕ ಇರುವುದರಿಂದ ಶಾಖ ಹೆಚ್ಚಾದಂತೆ ಸಹಜವಾಗಿ ಬೆಂಕಿ ಹತ್ತಿಕೊಳ್ಳುತ್ತದೆ. ಬಿಸಿಲಿನ ತಾಪಕ್ಕೆ ಕಾಗದಕ್ಕೂ ಸಹ ಬೆಂಕಿ ಹತ್ತಿಕೊಳ್ಳುತ್ತದೆ. ಪ್ಲಾಸ್ಟಿಕ್ ಸೇರಿದಂತೆ ಕೆಲವು ತ್ಯಾಜ್ಯಗಳಿಗೂ ಬೆಂಕಿ ಹತ್ತಿಕೊಳ್ಳುತ್ತದೆ. ಈ ಬಗ್ಗೆ ಬಹಳ ಹಿಂದೆಯೇ ಅಧ್ಯಯನ ನಡೆಸಿ ಅರಣ್ಯ ಕಾಯ್ದೆಯಡಿ ಕಾಡಿನೊಳಗೆ ಮನುಷ್ಯನ ಪ್ರವೇಶವೇ ಅಪರಾಧ ಎನ್ನಲಾಗಿದೆ. ತಮ್ಮ ಕೆಲವೇ ಗಂಟೆಗಳ ಮೋಜಿನ ಸ್ವಾರ್ಥಕ್ಕೆ, ಕಾಡು, ವನ್ಯಜೀವಿಗಳು, ಮನುಷ್ಯನ ಜೀವಹಾನಿ ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.