ಹಾಸನ: ಕೊರೊನಾ ಸಂದರ್ಭದಲ್ಲಿ ಫಾರ್ಮಸಿಸ್ಟರು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ನಗರದ ಬಿ.ಎಂ. ರಸ್ತೆಯಲ್ಲಿರುವ ಕೃಷ್ಣ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಫಾರ್ಮಸಿಸ್ ಅಧಿಕಾರಿಗಳ ಸಂಘ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಹಾಗೂ ವೈಜ್ಞಾನಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯರು, ನರ್ಸ್ಗಳು ಹಾಗೂ ಫಾರ್ಮಸಿಸ್ಟರ ಸೇವೆಯಿಂದಲೇ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಶಸ್ತ್ರಚಿಕಿತ್ಸಕ ಡಾ. ಕೃಷ್ಣಮೂರ್ತಿ ಮಾತನಾಡಿ, ಫಾರ್ಮಸಿ ಅಧಿಕಾರಿಗಳ ಸಂಘ ಎಂದು ಹೆಸರು ಬದಲಾದಂತೆ ಸೇವೆಯನ್ನು ಹೆಚ್ಚಿನ ರೀತಿ ನೀಡಬೇಕು. ಕೊರೊನಾ ಇರುವುದರಿಂದ ಮಾಸ್ಕ್ಬಳಸುವುದನ್ನು ನಿಲ್ಲಿಸಬಾರದು. ಈಗ ಕೋವಿಡ್ ಲಸಿಕೆ ಬಂದಿದ್ದು, ಯಾವುದೇ ಆತಂಕ ಇಲ್ಲದೆ ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ಮಾತನಾಡಿ, ಯಾವ ರೀತಿಯಲ್ಲಿ ಔಷಧ ತಯಾರಿಸಬೇಕು ಎಂಬ ಉದ್ದೇಶದಿಂದ ಫಾರ್ಮಸಿ ಶಿಕ್ಷಣ ಪ್ರಾರಂಭವಾಗಿದೆ. ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದರಿಂದ ಫಾರ್ಮಸಿಸ್ಟರು ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಆದಷ್ಟು ಬೇಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಗಮನ ಹರಿಸಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದರೂ ಸರ್ಕಾರದ ಮಟ್ಟದಲ್ಲಿ ಗುರುತಿಸುವ ಕೆಲಸ ಆಗಲಿಲ್ಲ. ಅನೇಕ ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2021ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪೂಜಾಶ್ರೀ, ಎಸ್. ರೋಹನ್, ಕೆ.ಎಲ್. ಸಾಗರ್, ಮನಸ್ವಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಅಧಿಕಾರಿಗಳನ್ನು ಗೌರವಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್ ಕುಮಾರ್, ಹಾಸನ ವೃತ್ತ ಸಹಾಯಕ ಔಷಧ ನಿಯಂತ್ರಕ ಸಿ.ಎಚ್. ಗಿರೀಶ್, ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಕೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಎಂ. ವಿಜಯಲಕ್ಷ್ಮಿ, ಕೋಶಾಧ್ಯಕ್ಷ ಶಿವಾನಂದ್ ದಳವಾಯಿ, ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಜವರೇಗೌಡ, ಮಡಿವಾಳಪ್ಪ ಈಳಗೇರ್, ಪ್ರಾಧ್ಯಾಪಕಿ ಪ್ರೀತಿ ಫರ್ನಾಂಡಿಸ್, ಗೌರವಾಧ್ಯಕ್ಷ ಗಣೇಶ್ ಉಡುಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.