ADVERTISEMENT

ಆಲೂರು | ಸೌರ ವಿದ್ಯುತ್‌: ಸಹಾಯಧನಕ್ಕೆ ಮೊರೆ

ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ನಲುಗಿದ ರೈತರು; ಬೆಳೆ ಉಳಿಸಿಕೊಳ್ಳಲು ಹರಸಾಹಸ

ಎಂ.ಪಿ.ಹರೀಶ್
Published 27 ಮಾರ್ಚ್ 2024, 5:38 IST
Last Updated 27 ಮಾರ್ಚ್ 2024, 5:38 IST
<div class="paragraphs"><p>ಆಲೂರು ತಾಲ್ಲೂಕಿನ ಕಸಬಾ ಮರಸು ಗ್ರಾಮದ ಸುಪ್ರೀತ್ ಅವರು ಕೊಳವೆಬಾವಿಯಿಂದ ನೀರೆತ್ತಲು ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿರುವುದು</p></div>

ಆಲೂರು ತಾಲ್ಲೂಕಿನ ಕಸಬಾ ಮರಸು ಗ್ರಾಮದ ಸುಪ್ರೀತ್ ಅವರು ಕೊಳವೆಬಾವಿಯಿಂದ ನೀರೆತ್ತಲು ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿರುವುದು

   

ಆಲೂರು: ವಿದ್ಯುತ್ ಕಣ್ಣಾಮುಚ್ಚಾಲೆ ಯಿಂದ ನಲುಗಿರುವ ಬಹುತೇಕ ರೈತರು ಕೃಷಿಗೆ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಸರ್ಕಾರ ಕೂಡಲೇ ಸಹಾಯಧನ ಬಿಡುಗಡೆ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ಬೇಡಿಕೆಯಾಗಿದೆ.

ಮಾರ್ಚ್‌ ಮುಗಿಯುತ್ತ ಬಂದರೂ ಒಂದು ಹದ ಮಳೆಯಾಗದೇ ಶುಂಠಿ ಬೆಳೆಗಾರರು ಕಂಗಾಲಾಗಿದ್ದಾರೆ. ಕೊಳವೆಬಾವಿ ಹೊಂದಿರುವ ರೈತರು ನೀರೆತ್ತಲು ವಿದ್ಯುತ್ ತೊಂದರೆಯಿಂದ ನಲುಗಿದ್ದಾರೆ.

ADVERTISEMENT

ಕಳೆದ ವರ್ಷ ಬೆಳೆದ ಶುಂಠಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದರ ಸಿಕ್ಕಿದ ಕಾರಣ, ಶೇ 70ಕ್ಕೂ ಹೆಚ್ಚು ರೈತರು ಶುಂಠಿ ಬೆಳೆಯಲು ಮುಂದಾಗಿದ್ದಾರೆ. ಈಗಾಗಲೇ ಶುಂಠಿ ನಾಟಿ ಮಾಡಲು ಭೂಮಿ ಹದ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸುಡು ಬಿಸಿಲು ವಾತಾವರಣ ಹೆಚ್ಚುತ್ತಿರುವುದರಿಂದ ಪ್ರತಿ ಮೂರು ಗಂಟೆಗೊಮ್ಮೆ ನೀರು ಸಿಂಪಡಿಸಬೇಕು. ವಿದ್ಯುತ್ ಸಮಸ್ಯೆಯಿಂದ ನೀರು ಸಿಂಪಡಿಸಲಾಗದೆ ಪರಿತಪಿಸುತ್ತಿದ್ದಾರೆ.

ದಿನದ 24 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಆಗುತ್ತಿದ್ದರೆ ಯಾವುದೇ ತೊಂದರೆ ಆಗುವುದಿಲ್ಲ. ಒಂದು ವಾರದಲ್ಲಿ ಹಗಲು ಮೂರು ಗಂಟೆಗೊಮ್ಮೆ, ಮತ್ತೊಂದು ವಾರದಲ್ಲಿ ರಾತ್ರಿ ಮೂರು ಗಂಟೆಗೊಮ್ಮೆ 3 ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ, ರೈತರು ರಾತ್ರಿ ವೇಳೆ ನಿದ್ರೆ ಇಲ್ಲದೇ ಹೊಲದ ಬಳಿ ಮಲಗುವ ಸ್ಥಿತಿ ನಿರ್ಮಾಣ ವಾಗಿದೆ. ಒಂದೆಡೆ ಕಾಡಾನೆ ಹಾವಳಿ ಮತ್ತೊಂದೆಡೆ ವಿಷಜಂತುಗಳ ಕಾಟ ಇರುವುದರಿಂದ ಭಯಭೀತರಾಗಿ ರಾತ್ರಿ ಕಳೆಯುವಂತಾಗಿದೆ. ಇಂತಹ ಸ್ಥಿತಿ ನಿರ್ಮಾಣ ಆಗಿರುವುದರಿಂದ ಕೆಲ ರೈತರು ಸೌರ ವಿದ್ಯುತ್‌ ಅಳವಡಿಸಲು ಮುಂದಾಗಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಸೌರ ವಿದ್ಯುತ್‌ ಯೋಜನೆಯಡಿ ಸಹಾಯಧನ ಸಿಗಲಿದೆ. ಯೋಜನೆ ಈಗಾಗಲೇ ಮುಗಿದಿ ರುವುದರಿಂದ ರೈತರು ಪೂರ್ಣ ಹಣ ಪಾವತಿ ಮಾಡಿ, ಸರ್ಕಾರ ಗುರುತು ಮಾಡಿರುವ ಕಂಪನಿ ಮೂಲಕ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಸಿ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಅನುಭವಿಸಿದ ರೈತರು, ಪ್ರಸಕ್ತ ಸಾಲಿನಲ್ಲಿ ಸಾಲ ಮಾಡಿ ಅಡಿಕೆ, ಶುಂಠಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಸಂಪೂರ್ಣ ಹಣವನ್ನು ಪಾವತಿಸಿ ಸೌರ ವಿದ್ಯುತ್‌ ವ್ಯವಸ್ಥೆ ಮಾಡಿಕೊಳ್ಳಲು ಶಕ್ತರಾಗದೇ ಕೆಲ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಸಹಾಯಧನವನ್ನು ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

****

ಸರ್ಕಾರದಿಂದ ಬಿಡುಗಡೆ ಯಾಗಿದ್ದ ಸಹಾಯಧನ ಮುಗಿದಿದೆ. ಸಹಾಯಧನ ಬಿಡುಗಡೆಯಾದ ಕೂಡಲೇ ರೈತರಿಗೆ ವಿತರಿಸಲಾಗುವುದು.

-ಕೇಶವ್, ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ

****

ಅರ್ಜಿ ಸಲ್ಲಿಸಿ 2 ತಿಂಗಳಾಯಿತು. ವಿದ್ಯುತ್ ಸಮಸ್ಯೆ ಇರುವುದರಿಂದ ಸೌರ ವಿದ್ಯುತ್‌ ಅಗತ್ಯವಿದೆ. ಸಹಾಯಧನ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ

-ನಿಂಗರಾಜು, ನೀಲನಹಳ್ಳಿ ರೈತ

****

ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಕೆಯಿಂದ 24 ಗಂಟೆ ಕೊಳವೆ ಬಾವಿಯಿಂದ ನೀರನ್ನು ಹರಿಸ ಬಹುದು. ವಿದ್ಯುತ್ ನಂಬಿಕೊಂಡರೆ ಬೆಳೆ ಬೆಳೆಯುವುದು ಅಸಾಧ್ಯ.

-ಸುಪ್ರೀತ್, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.