
ಆಲೂರು: ಸಮಯ ಪ್ರಜ್ಞೆ ಮತ್ತು ನೈತಿಕತೆ ಬದುಕಿನಲ್ಲಿ ಗುರಿ ತಲುಪಲು ರಹದಾರಿ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ಆಲೂರಿನ ರಾಧಮ್ಮ ಜನಸ್ಪಂದನ ವೇದಿಕೆ ಆಯೋಜಿಸಿದ್ದ ಐದನೇ ವರ್ಷದ ಪ್ರತಿಭಾ ಪುರಸ್ಕಾರದಲ್ಲಿ ಅವರು ಮಾತನಾಡಿದರು. ‘ಒಗ್ಗಟ್ಟಾಗಿ ಇದ್ದಾಗ ಸಂಘಟನೆಯಲ್ಲಿ ಸಮಾಜಮುಖಿ ಕೆಲಸ ಮಾಡಬಹುದು. ಹೇಮಂತ್ ಕುಮಾರ್ ತಮ್ಮ ತಾಯಿ ದಿ. ರಾಧಮ್ಮ ಹೆಸರಿನಲ್ಲಿ ಸಾಮಾಜಿಕ ಕಾರ್ಯ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಸಿಮೆಂಟ್ ಮಂಜು, ಈಗಿನ ಕಾಲದಲ್ಲಿ ಫಲಾಪೇಕ್ಷೆ ಇಲ್ಲದೆ ಇಂತಹ ಕೆಲಸ ಮಾಡುವವರು ವಿರಳ. ಜನಸ್ಪಂದನ ವೇದಿಕೆ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದೆ ಎಂದರು. ಬೇಲೂರು ಶಾಸಕ ಎಚ್. ಕೆ. ಸುರೇಶ್, ಆರೋಗ್ಯ ರಕ್ಷಾ ಸದಸ್ಯತ್ವಕ್ಕೆ ಚಾಲನೆ ನೀಡಿದರು.
ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಕೂಡು ಕುಟುಂಬ ವಿಭಜನೆ ಆಗಿದೆ. ಕೆರೆ ಕಟ್ಟೆಗಳು ಒತ್ತುವರಿ ಆಗಿವೆ. ಮಕ್ಕಳನ್ನು ಸುಸಂಸ್ಕೃತರಾಗಿ ಮಾಡಬೇಕು ಎಂಬ ಚಿಂತನೆ ಪೋಷಕರಲ್ಲಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಕ್ಕಲಿಗರ ಸಂಘದ ನಿರ್ದೇಶಕ ಬಾಗೂರು ಮಂಜೇಗೌಡ ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ನಿವೃತ್ತ ಸಿಇಒ ಬಿ. ಎ. ಪರಮೇಶ್ ಮಾತನಾಡಿ, ಹೇಮಂತಕುಮಾರ್ ಏನನ್ನೂ ಬಯಸದೆ ಹೆಣ್ಣು ಮಕ್ಕಳಿಗೆ ಗರ್ಭಕೊರಳು ಕ್ಯಾನ್ಸರ್ ತಡೆಯುವ ಲಸಿಕೆಯನ್ನು ಉಚಿತವಾಗಿ ಕೊಡಿಸುತ್ತಿರುವುದಲ್ಲದೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಿದ್ದಾರೆ ಎಂದರು.
ರಾಧಮ್ಮ ಜನಸ್ಪಂದನ ಅಧ್ಯಕ್ಷ ಹೇಮಂತಕುಮಾರ್, ಐದು ವರ್ಷದ ವಿವರ ತಿಳಿಸಿದರು. ವಕೀಲ ವಿಜಯಕುಮಾರ್, ಸಾವಿತ್ರಿ, ಪ್ರೇಮಲತಾ, ಜಿ. ಪ್ರಕಾಶ್, ನಾಯಕರಹಳ್ಳಿ ಮಂಜೇಗೌಡ, ಎಚ್. ಪಿ. ಮೋಹನ್, ಎಂ.ಪಿ. ಹರೀಶ್, ಆನಂದ್, ಕಾರ್ಯದರ್ಶಿ ಸಿ. ಸೋಮಶೇಖರ್, ಕೆ. ಎಂ. ಸಾಗರ್, ಅಜಯವ, ನವೀನ್, ಕಿರಣ್, ಕಸ್ತೂರಿ, ಹೊನ್ನೇಗೌಡ, ಅಜಿತ್, ಲೊಕೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.