ಹಾಸನ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟಿರುವ ಡಿ. 5ರ ರಾಜ್ಯ ಬಂದ್ಗೆ ಬೆಂಬಲ ನೀಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಹೇಳಿದರು.
‘ಕನ್ನಡಕ್ಕೆ ಧಕ್ಕೆಯಾದಾಗ ಸಂಘಟನೆಗಳೆಲ್ಲ ಒಟ್ಟಾಗಿ ಹೋರಾಡುತ್ತವೆ. ಕರ್ನಾಟಕವನ್ನು ಕೀಳಾಗಿ ಕಾಣುವ ಮರಾಠಿಗರಅಭಿವೃದ್ಧಿಗೆ ರಾಜ್ಯದ ತೆರಿಗೆ ಹಣ ಪೋಲು ಮಾಡಲು ಬಿಡುವುದಿಲ್ಲ. ಬಂದ್ಗೆ ಕರೆ ಕೊಟ್ಟಿದ್ದರೂ ಕೆಎಸ್ಆರ್ಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಸರ್ಕಾರ ಹೇಳಿದೆ. ಆದರೆ, ಜಿಲ್ಲೆಯಲ್ಲಿ ಸಾರಿಗೆ ಬಸ್ ಓಡಾಟಕ್ಕೆ ಅವಕಾಶ ಮಾಡಿಕೊಡುವುದಿಲ್ಲ’ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಟೊ, ಕ್ಯಾಬ್ ಚಾಲಕರ ಸಂಘ, ತರಕಾರಿ, ಎಪಿಎಂಸಿ ವರ್ತಕರು, ಎಲ್ಲ ಅಂಗಡಿ ಮಾಲೀಕರು ಶನಿವಾರ ಸ್ವಯಂ ಪ್ರೇರಿತ ಬಂದ್ ಮೂಲಕ ಹೋರಾಟಕ್ಕೆ ಶಕ್ತಿ ತುಂಬಲಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಜಾತಿ, ಸಮುದಾಯಗಳ ನಡುವೆ ಕಲಹ ಸೃಷ್ಟಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಬೇಕಿದೆ. ತಜ್ಞರು, ಕನ್ನಡಪರ ಹೋರಾಟಗಾರರು, ಸಾಹಿತಿಗಳ ಅಭಿಪ್ರಾಯ ಪಡೆಯದೆ ಪ್ರಾಧಿಕಾರ ರಚಿಸಲಾಗಿದೆ. ಪ್ರಶ್ನಿಸದೆ ಸುಮ್ಮನಿದ್ದರೆ ನಮ್ಮ ಹಕ್ಕುಗಳನ್ನು ಮಾರಾಟ ಮಾಡಲು ಜನಪ್ರತಿನಿಧಿಗಳು ಹಿಂಜರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಛಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷ ಪುಟ್ಟರಾಜು, ಕನ್ನಡ ಪರ ಹೋರಾಟಗಾರ ಸಂಗಂ, ಪ್ರವೀಣ್, ದಿನೇಶ್ ಸುದ್ದಿಗೋಷ್ಠಿಯಲ್ಲಿಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.