ADVERTISEMENT

ದೇವೇಗೌಡರ ಕುಟುಂಬದ ಪರಿಶ್ರಮಕ್ಕೆ ಜಿಲ್ಲೆಯ ಅಭಿವೃದ್ಧಿಯೇ ಸಾಕ್ಷಿ: ಎಚ್.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 0:45 IST
Last Updated 10 ಡಿಸೆಂಬರ್ 2024, 0:45 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಹಾಸನ: ‘ನನ್ನ ಕೈಲಾದ ಕೆಲಸವನ್ನು ಈ ಜಿಲ್ಲೆಗೆ ಮಾಡುತ್ತೇನೆ. ಇಂತಹ 10 ಸಮಾವೇಶ ಮಾಡಿದರು ನಾನೇನು ತಲೆಕೆಡಿಸಿಕೊಳ್ಳುವುದಿಲ್ಲ. ಇವರಿಗೆ ತಾಕತ್ತಿದ್ದರೆ, ಕಾಂಗ್ರೆಸ್ ಪಕ್ಷವನ್ನು ಬಿಟ್ಟು ನಮ್ಮ ರೀತಿ ಪ್ರಾದೇಶಿಕ ಪಕ್ಷ ಕಟ್ಟಲಿ ಎಂದು ಶಾಸಕ ಎಚ್‌.ಡಿ. ರೇವಣ್ಣ ಸವಾಲು ಹಾಕಿದರು.

ಕಾಂಗ್ರೆಸ್‌ ಜನಕಲ್ಯಾಣ ಸಮಾವೇಶದಲ್ಲಿ ಮಾಡಿರುವ ಆರೋಪಗಳಿಗೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಿರುಗೇಟು ನೀಡಿದ ಅವರು, ‘ಇವರೆಲ್ಲ ಜೆಡಿಎಸ್ ಮುಗಿದು ಹೋಯಿತು ಎನ್ನುತ್ತಿದ್ದಾರೆ. 2028ಕ್ಕೆ ಜೆಡಿಎಸ್ ಏನು ಎಂಬುದು ಎಲ್ಲರಿಗೂ ಗೊತ್ತಾಗಲಿದೆ’ ಎಂದರು.

‘ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಪರಿಶ್ರಮ ಇದೆ ಎನ್ನುವುದಕ್ಕೆ ನೂರಾರು ಸಾಕ್ಷಿ ಗುಡ್ದೆಗಳಿವೆ. ದೇವೇಗೌಡರು ಪ್ರಧಾನಿ ಆಗಿದ್ದಾಗ, ಕೇಂದ್ರ ಸರ್ಕಾರದ ನಬಾರ್ಡ್‌ನಿಂದ ರೈತರಿಗೆ ಕಾರ್ಯಕ್ರಮ ರೂಪದಲ್ಲಿ ಸಾಲ ಕೊಡುವಂತೆ ಮಾಡಿದ್ದರು. ನಬಾರ್ಡ್ ಮೂಲಕ ರೈತರಿಗೆ ಸಾಲ ಕೊಡುವುದು, ರಸ್ತೆಗೆ ಹಣ ಕೊಡುವ ಪರಿಪಾಠ ಆರಂಭಿಸಿದ್ದು ದೇವೇಗೌಡರು’ ಎಂದ ಅವರು, ‘ಅಪೆಕ್ಸ್ ಬ್ಯಾಂಕ್‌ಗೆ ₹9,162 ಕೋಟಿ ಕೊಡಿ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಗೂ ನಬಾರ್ಡ್‌ಗೆ ದೇವೇಗೌಡರು ಪತ್ರ ಬರೆದಿದ್ದಾರೆ’ ಎಂದರು.

ADVERTISEMENT

‘ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕಿಗೆ ಶೇ 70 ರಷ್ಟು ಹಣ ಕೊಡುತ್ತಿದ್ದರು. ಕೇಂದ್ರದಿಂದ ಸಿಗುವ ಸೌಲಭ್ಯವನ್ನು ರಾಜ್ಯಕ್ಕೆ ದೊರಕುವಂತೆ ಮಾಡಿದ್ದೇ ದೇವೇಗೌಡರು. ಎಚ್.ಡಿ. ಕುಮಾರಸ್ವಾಮಿ ಸಾಲ ಮನ್ನಾ ಮಾಡದಿದ್ದರೆ, ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳು ಮುಳುಗಿ ಹೋಗುತ್ತಿದ್ದವು ಅಂತಹ ದೇವೇಗೌಡರನ್ನು ಸಾಕ್ಷಿಗುಡ್ಡೆ ಕೇಳುತ್ತಾರೆ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕುಮಾರಸ್ವಾಮಿ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ಗಳ ₹531 ಕೋಟಿ ಸಾಲಮನ್ನಾ ಮಾಡಿದರು. ರಾಷ್ಟ್ರೀಯ ಬ್ಯಾಂಕುಗಳ ₹9,600 ಕೋಟಿ ಸಾಲಮನ್ನಾ ಆಗಿದೆ. ರೈತರ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು, ರೈತರ ಸಾಲ ಮನ್ನಾ ಮಾಡಲಿ’ ಎಂದು ಸವಾಲು ಹಾಕಿದರು.

‘ದೇವೇಗೌಡರ ರಾಜಕೀಯ ಜೀವನ ಮುಗಿದು ಹೋಯಿತು ಎಂದು ಕಾಂಗ್ರೆಸ್‌ ನಾಯಕರು ಭಾಷಣ ಮಾಡುತ್ತಾರೆ. ಆರು ಜಿಲ್ಲೆಯ ಜನರನ್ನು ಕರೆದುಕೊಂಡು ಬಂದು ಸಮಾವೇಶ ಮಾಡಿದ್ದಾರೆ. ಯಾವ ಆಂದೋಲನ ಇದು’ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಕೇಂದ್ರವನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳಬೇಕು‌. ಬೆಳಿಗ್ಗೆ ಎದ್ದರೆ ಪ್ರಧಾನಿಯನ್ನು ಬೈಯುತ್ತಾರೆ. ವಿಶ್ವಾಸ ಇಟ್ಟುಕೊಂಡರೆ ಮಾತ್ರ ಕೇಂದ್ರ ಸರ್ಕಾರ ರಾಜ್ಯದ ಪರ ನಿಲುವು ಹೊಂದಲಿದೆ.
ಎಚ್‌.ಡಿ. ರೇವಣ್ಣ ಶಾಸಕ
ರೈಲು ಕಂಬಿ ಕಿತ್ತುಕೊಂಡು ಹೋದವರು
ಈ ಜಿಲ್ಲೆಗೆ ಕಾಂಗ್ರೆಸ್ ಪಕ್ಷ ಏನು ಕೊಡುಗೆ ಕೊಟ್ಟಿದೆ? ಎಂಬುದನ್ನು ಹೇಳಲಿ. ಬ್ರಿಟಿಷರ ಕಾಲದಲ್ಲಿ ಆಗಿದ್ದ ಹಾಸನ– ಮೈಸೂರು ರೈಲು ಮಾರ್ಗದ ಕಂಬಿ ಕಿತ್ತುಕೊಂಡು ಹೋದವರು ಕಾಂಗ್ರೆಸ್‌ನವರು ಎಂದು ಎಚ್.ಡಿ. ರೇವಣ್ಣ ಆರೋಪಿಸಿದರು. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಹತ್ತೂವರೆ ತಿಂಗಳಿನಲ್ಲಿ ಆ ರೈಲ್ವೆ ಮಾರ್ಗ ಮರು ನಿರ್ಮಾಣ ಮಾಡಲು ಕ್ರಮ ಕೈಗೊಂಡರು ಎಂದರು. ಈ ಜಿಲ್ಲೆಗೆ ಉಪ ಮುಖ್ಯಮಂತ್ರಿ ಏನು ಕೊಡುಗೆ ಕೊಟ್ಟಿದ್ದಾರೆ? ರೈಲ್ವೆ ಮಾರ್ಗ ಕೋರ್ಟ್ ನೂತನ ಬಸ್ ನಿಲ್ದಾಣಗಳನ್ನು ಕೊಟ್ಟಿದ್ದು ಯಾರು? ಇವೆಲ್ಲ ಸಾಕ್ಷಿ ಗುಡ್ಡೆಗಳಲ್ಲವೇ? ಗಿರಾಕಿಗಳೇ ಸರ್ಕಾರಿ ಆಸ್ಪತ್ರೆ ಎಂಜಿನಿಯರ್ ವೈದ್ಯಕೀಯ ಕಾಲೇಜು ನರ್ಸಿಂಗ್ ಕಾಲೇಜುಗಳನ್ನು ನೋಡಿ. ಈ ಜಿಲ್ಲೆಯ ಜನ ದೇವೇಗೌಡರ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಅವರ ಋಣ ನಮ್ಮ ಮೇಲಿದ್ದು ಅದನ್ನು ತೀರಿಸುತ್ತೇವೆ ಎಂದು ಹೇಳಿದರು.
ನಕಲಿ ಕಾಂಗ್ರೆಸ್‌
ಹಿಂದಿನ ಕಾಂಗ್ರೆಸ್ ಈಗ ಇಲ್ಲ. ಈಗ ಇರುವುದು ನಕಲಿ ಕಾಂಗ್ರೆಸ್ ಎಂದು ಟೀಕಿಸಿದ ರೇವಣ್ಣ ನಮ್ಮಿಂದ ವಲಸೆ ಹೋದವರು ಈಗ ಅಲ್ಲಿದ್ದಾರೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಮೂರು ಚುನಾವಣೆಯಲ್ಲಿ ಒಂದು ರೂಪಾಯಿ ಖರ್ಚು ಮಾಡಿಸದೇ ಗೆಲ್ಲಿಸಿಕೊಂಡು ಬಂದೆ. ಇದಕ್ಕೆ ಜೇನುಕಲ್ ಸಿದ್ದೇಶ್ವರ ಸ್ವಾಮಿಯೇ ಸಾಕ್ಷಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.