ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಬಾಲಕಿಯೊಬ್ಬಳ ನಾಪತ್ತೆ ಪ್ರಕರಣ ತಿರುವು ಪಡೆದುಕೊಂಡಿದೆ. ಸದ್ಯ ಬಾಲಕಿ ತುಮಕೂರಿನಲ್ಲಿ ಪತ್ತೆಯಾಗಿದ್ದು, ನಾಪತ್ತೆಯಾಗುವ ಮೊದಲು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದು ಬಹಿರಂಗವಾಗಿದೆ.
ನ.7 ರಂದು ಶಾಲೆ ಮುಗಿಸಿ ಹೊರಟಿದ್ದ 13 ವರ್ಷದ ಬಾಲಕಿ, ನಾಪತ್ತೆಯಾಗಿದ್ದಳು. ನಾಪತ್ತೆಯಾದ ದಿನದಿಂದ ಬಾಲಕಿಯ ಪೋಷಕರು ಅನೇಕ ಕಡೆ ಹುಡುಕಾಟ ನಡೆಸಿದ್ದು, ಸಿಗದಿದ್ದಾಗ ಪೊಲೀಸರ ಮೊರೆ ಹೋಗಿದ್ದರು.
ಬಾಲಕಿ ಓದುತ್ತಿದ್ದ ಗ್ರಾಮದ ಗಿರೀಶ್ ಎಂಬಾತನ ಮೇಲೆ ಸಂಶಯ ವ್ಯಕ್ತಪಡಿಸಿ, ದೂರನ್ನು ನೀಡಿದ್ದರು. ಆರೋಪಿ ಗಿರೀಶ್ನನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ, ಬಾಲಕಿಯ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ನಾಟಕವಾಡಿದ್ದ ಆರೋಪಿಯ ಕೃತ್ಯ ಇದೀಗ ಬಯಲಾಗಿದೆ.
‘ಬಾಲಕಿ ನಾಪತ್ತೆ ಆಗುವ ಸ್ವಲ್ಪ ದಿನಗಳ ಮುಂಚೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಳು. ಆಸ್ಪತ್ರೆಗೆ ಹೋಗುವ ವೇಳೆ ಪರಿಚಯವಾದ ಗಿರೀಶ್, ಸಹಾಯ ಮಾಡುತ್ತೇನೆ ಎಂದು ನಂಬಿಸಿ ಲೈಂಗಿಕ ಕಿರುಕಳ ನೀಡಿದ್ದಾನೆ’ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
‘ಇದು ಮುಂದುವರಿದಿದ್ದು, ಲೈಂಗಿಕ ಹಿಂಸೆ ಪ್ರಾರಂಭಿಸಿದ್ದಾನೆ. ಹಿಂಸೆ ತಾಳಲಾರದೇ ನ.7 ರಂದು ಶಾಲೆ ಮುಗಿಸಿ ತಿಪಟೂರು ಕಡೆಗೆ ಹೋಗುವ ಬಸ್ ಹತ್ತಿ ಬಾಲಕಿ ಪ್ರಯಾಣಿಸಿದ್ದಳು. ಬಸ್ನಲ್ಲಿ ಅಳುತ್ತ ಕುಳಿತಿದ್ದ ವೇಳೆ ಮಹಿಳೆಯೊಬ್ಬರು ಬಾಲಕಿಯನ್ನು ವಿಚಾರಿಸಿ, ತುಮಕೂರಿನ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಬೇರೆ ಶಾಲೆಗೂ ಸೇರಿಸಿದ್ದರು. ದೇವಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿಯನ್ನು ನೋಡಿದ ಜನರು, ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ವಿವರಿಸಿದರು.
ಇದೀಗ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, ಬಾಲಕಿಯ ಹೇಳಿಕೆಯಿಂದ ಆರೋಪಿ ಗಿರೀಶ್ ಕೃತ್ಯ ಬಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.