ADVERTISEMENT

ಹಾಸನ: ಹುತ್ತದ ರೂಪದಲ್ಲಿ ದರ್ಶನ ನೀಡುವ ದೇವಿ

ಪ್ರಕೃತಿ ಸೌಂದರ್ಯಕ್ಕೆ ಮನಸೋತು ಹಾಸನದಲ್ಲಿ ನೆಲೆಸಿರುವ ಸಪ್ತಮಾತೃಕೆಯರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:35 IST
Last Updated 24 ಅಕ್ಟೋಬರ್ 2024, 7:35 IST
ಮೊದಲು ಹೀಗಿತ್ತು ಹಾಸನಾಂಬ ದೇವಸ್ಥಾನ (ಸಂಗ್ರಹ ಚಿತ್ರ)
ಮೊದಲು ಹೀಗಿತ್ತು ಹಾಸನಾಂಬ ದೇವಸ್ಥಾನ (ಸಂಗ್ರಹ ಚಿತ್ರ)   

ಹಾಸನ: ಜಿಲ್ಲೆಯ ಶಕ್ತಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ನಗರದ ಹಾಸನಾಂಬ ದೇವಿಯ ಸ್ಥಳ ಮಹಾತ್ಮೆ ಅಪಾರವಾಗಿದ್ದು, ನಾಡಿನಾದ್ಯಂತ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಕಾತುರರಾಗಿದ್ದಾರೆ. ಹಾಸನಕ್ಕೆ ತನ್ನದೇ ಆದ ಇತಿಹಾಸವಿದ್ದು, ಪೌರಾಣಿಕವಾಗಿಯೇ ಸ್ಥಳವು ಹಲವು ಐತಿಹ್ಯಗಳನ್ನು ಹೊಂದಿದೆ.

12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನು ದೇವಾಲಯ ಕಟ್ಟಿದ ಬಗ್ಗೆ ಹಾಸನ ತಾಲ್ಲೂಕಿನ ಕುದರಗುಂಡಿ ಎಂಬ ಗ್ರಾಮದಲ್ಲಿರುವ ಕ್ರಿ.ಶ. 1140ರ ವೀರಗಲ್ಲಿನ ಶಿಲಾಶಾಸನದಲ್ಲಿ ಕಂಡು ಬರುತ್ತದೆ. ಹಾಸನಾಂಬ ದೇವಿ ಹೆಸರಿನಿಂದಲೇ ನಗರಕ್ಕೆ ಹಾಸನ ಎಂದು ಹೆಸರು ಬಂದಿದೆ.

ಸ್ಥಳ ಪುರಾಣದ ಪ್ರಕಾರ ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮಿದೇವಿ, ವರಾಹಿ ‌ಮತ್ತು ಚಾಮುಂಡಿದೇವಿಯರು ವಿಹರಿಸುತ್ತಿದ್ದಾಗ ಈ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆಸಲು ನಿರ್ಧರಿಸಿದರು.

ADVERTISEMENT

ಅವರಲ್ಲಿ ವೈಷ್ಣವಿ, ಮಹೇಶ್ವರಿ, ಕುಮಾರಿಯರು ಈಗಿನ ಹಾಸನಾಂಬ ದೇಗುಲದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರು. ಬ್ರಾಹ್ಮಿದೇವಿಯು ಸಮೀಪದ ಕೆಂಚಮ್ಮನ ಹೊಸಕೋಟೆಯಲ್ಲಿ, ಇಂದ್ರಾಣಿ, ವರಾಹಿ, ಮತ್ತು ಚಾಮುಂಡಿ ದೇವಿಯರು ಹಾಸನ ನಗರ ಮಧ್ಯಬಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರು ಎಂದು ಹೇಳಲಾಗಿದೆ.

ಸುಂದರ ಶಿಲ್ಪಕಲೆಗಳಿಗೆ ಹೆಸರಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳಗಳನ್ನು ಒಳಗೂಂಡಿರುವ ಹಾಸನ ಜಿಲ್ಲೆಯ ಈ ದೇವಾಲಯದಲ್ಲಿ, ಆ ರೀತಿಯ ವಿಶೇಷ ಶಿಲ್ಪಕಲಾ ವೈಭವ ಇಲ್ಲದಿದ್ದರೂ, ದೇವಿಯ ಆರಾಧಕರೂ ಲಕ್ಷಾಂತರ ಸಂಖ್ಯೆಯಲ್ಲಿ ದರ್ಶನಕ್ಕೆ ಬರುತ್ತಾರೆ.

ದೇವಿಯ ಮಹಿಮೆಯ ಬಗ್ಗೆ ಅಪಾರವಾಗಿ ನಂಬಿಕೆ ಭಕ್ತ ಸಮೂಹದಲ್ಲಿದ್ದು, ನಂಬಿಕೆ, ಭಕ್ತಿ, ಮಹಿಮೆಗಳೆ ಇಲ್ಲಿನ ವೈಶಿಷ್ಟ್ಯ. ಹಚ್ಚಿದ ದೀಪ, ಬಡಿಸಿದ ನೈವೇದ್ಯ, ಮುಡಿಸಿದ ಹೂವುಗಳು ವರ್ಷಪೂರ್ತಿ ಹಾಗೆಯೇ ಇರುವುದು ಇಲ್ಲಿನ ವಿಶೇಷ.

ಸಪ್ತಮಾತೃಕೆಯರ ಹುತ್ತದ ರೂಪದ ವಿಗ್ರಹ ದೇಗುಲದಲ್ಲಿದ್ದು, ಬೇರೆ ದೇವರಂತೆ ಹಾಸನಾಂಬ ದೇವಿಯನ್ನು ಭಕ್ತರು ಎಲ್ಲ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಾರೆ. ಹಾಸನದ ಮೂಲದವರು ರಾಜ್ಯದ ಯಾವುದೇ ಭಾಗದಲ್ಲಿದ್ದರೂ, ದರ್ಶನೋತ್ಸವದ ಸಮಯದಲ್ಲಿ ದೇವಿಯ ದರ್ಶನಕ್ಕೆ ಬರುತ್ತಾರೆ.

ದೀಪಾವಳಿಯ ಮೊದಲ ದಿನ ದೇವಿಕೆರೆಯಲ್ಲಿ ಸಿದ್ದೇಶ್ವರ ಸ್ವಾಮಿಯ ತೆಪೋತ್ಸವ, ಎರಡನೇ ದಿನ ಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಪ್ರತಿವರ್ಷವೂ ಸಿದ್ದೇಶ್ವರ ಸ್ವಾಮಿಯ ಉತ್ಸವಮೂರ್ತಿಯ ರಥೋತ್ಸವ ಇರುತ್ತದೆ. ಅಮಾವಾಸ್ಯೆಯಂದು ಸಿದ್ದೇಶ್ವರ ಸ್ವಾಮಿಯ ರಾವಣೋತ್ಸವವು ವಿದ್ಯುತ್ ದೀಪಾಲಂಕೃತಗೊಂಡ ನಗರದ ಮುಖ್ಯ ಬೀದಿಗಳಲ್ಲಿ ವಿಜೃಂಭಣೆಯಿಂದ ಸಂಚರಿಸುತ್ತದೆ.

ಇದರ ಪ್ರಮುಖ ಆಕರ್ಷಣೆ ಎಂದರೆ ಈಶ್ವರನು ರಾವಣನ ಹೆಗಲ ಮೇಲೆ ಸಂಚರಿಸುವುದು. ಈ ಸಂದರ್ಭದಲ್ಲಿ ಗ್ರಾಮೀಣ ಕುಣಿತಗಳಾದ ನಂದಿಧ್ವಜ, ವೀರಗಾಸೆ, ವೀರಭದ್ರನ ಖಡ್ಗ, ಕೀಲುಕುದುರೆ, ಕೊಂಬು – ಕಹಳೆಗಳು ವಿಜೃಂಭಿಸುತ್ತವೆ. ಕೊನೆಯ ದಿನ ಮುಂಜಾನೆಯ ಚಳಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಕೆಂಡೋತ್ಸವ ಹಾಗೂ ವಿಶ್ವರೂಪ ದರ್ಶನ ಇರುತ್ತದೆ. ಆಕರ್ಷಕವಾದ ಪಟಾಕಿ, ಬಾಣ-ಬಿರುಸುಗಳ ಪ್ರದರ್ಶನದಿಂದ ಆಕಾಶದಲ್ಲಿ ಮೂಡುವ ಚಿತ್ತಾರಗಳು ನೋಡುಗರ ಗಮನ ಸೆಳೆಯುತ್ತವೆ.

ಈಗಿರುವ ಹಾಸನಾಂಬೆ ದೇವಸ್ಥಾನ
ಸೊಸೆ ಕಲ್ಲು
ದೇಗುಲದ ಗರ್ಭಗುಡಿಯಲ್ಲಿ ದೇವಿಯ ವಿಗ್ರಹದ ಎದುರು ಒಂದು ಪುಟ್ಟ ಕಲ್ಲಿದೆ. ಅದನ್ನು ಸೊಸೆ ಕಲ್ಲು ಎನ್ನುತ್ತಾರೆ. ಅದಕ್ಕೊಂದು ವಿಶೇಷ ಕಥೆಯಿದೆ. ನಿತ್ಯ ಸೊಸೆಗೆ ಕಿರುಕುಳ ನೀಡುತ್ತಿದ್ದ ಅತ್ತೆ ಒಂದು ದಿನ ಸೊಸೆಯನ್ನು ಹಿಂಬಾಲಿಸಿದಳು. ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದ ಸೊಸೆಯನ್ನು ಕಂಡು ಸಿಟ್ಟಿನಿಂದ ‘ಮನೆಯ ಕೆಲಸಕ್ಕಿಂತ ದೇವಿ ದರ್ಶನ ನಿನಗೆ ಹೆಚ್ಚಾಯಿತೇ’ ಎಂದು ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದುಕೊಂಡು ಸೊಸೆಯ ತಲೆಗೆ ಕುಕ್ಕಿದಳು. ಆ ನೋವನ್ನು ತಾಳಲಾರದೇ ಸೊಸೆಯು ‘ಅಮ್ಮಾ ಹಾಸನಾಂಬೆ ತಾಯೆ ಕಾಪಾಡು’ ಎಂದು ಭಕ್ತಿಯಿಂದ ಕೂಗಿದಳು. ಪ್ರತ್ಯಕ್ಷಳಾದ ದೇವಿಯು ‘ಯಾವಗಲೂ ನೀನು ನನ್ನ ಸನ್ನಿಧಾನದಲ್ಲೇ ನೆಲಸು’ ಎಂಬ ವರವನ್ನು ನೀಡಿದಳು. ಅದಿನಿಂದ ಸೊಸೆಯು ಅಲ್ಲಿಯೇ ಕಲ್ಲಾಗಿ ನೆಲೆಸಿದಳು. ಪ್ರತಿ ವರ್ಷವು ಒಂದು ಭತ್ತದ ಕಾಳಿನಷ್ಟೂ ದೇವಿಯ ವಿಗ್ರಹದ ಕಡೆ ಚಲಿಸುವಳೆಂದು ಹಾಗೂ ದೇವಿ ಪಾದ ತಲುಪಿದ ಕ್ಷಣವೇ ಕಲಿಯುಗ ಅಂತ್ಯ ಎನ್ನುವ ವಾಡಿಕೆಯಿದೆ. ಕಳ್ಳಪ್ಪನ ಗುಡಿ ದೇಗುಲಕ್ಕೆ ಆಭರಣಗಳನ್ನು ಕದಿಯಲು ಬಂದ ನಾಲ್ವರು ಕಳ್ಳರಿಗೆ ದೇವಿ ಶಾಪ ನೀಡಿದಾಗ ಅವರು ಕಲ್ಲಾದರು. ಈ ಗುಡಿಯನ್ನು ಕಳ್ಳಪ್ಪನ ಗುಡಿ ಎನ್ನುತ್ತಾರೆ. ಹಾಸನಾಂಬ ದೇವಿಯ ದೇವಾಲಯವನ್ನು ಪ್ರವೇಶಿಸಿದ ತಕ್ಷಣ ಕಾಣುವುದು ಸಿದ್ದೇಶ್ವರ ಸ್ವಾಮಿಯ ದೇಗುಲ. ಸಾಮಾನ್ಯವಾಗಿ ಶಿವನ ರೂಪವಾದ ಸಿದ್ದೇಶ್ವರ ಸ್ವಾಮಿಯು ಲಿಂಗರೂಪದಲ್ಲಿ ಇರುತ್ತದೆ. ಆದರೆ ಇಲ್ಲಿ ವಿನೂತನವಾದ ಉದ್ಭವಮೂರ್ತಿಯು ಅರ್ಜುನನಿಗೆ ಪಾಶುಪತಾಸ್ತ್ರ ನೀಡುತ್ತಿರುವ ಆಕಾರದಲ್ಲಿ ಒಡಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.