ADVERTISEMENT

ಸಕಲೇಶಪುರ: ಚರ್ಚ್‌ಗೆ ಭೂಕುಸಿತ ಆತಂಕ

ಜಾನೆಕೆರೆ ಆರ್‌.ಪರಮೇಶ್‌
Published 26 ಜೂನ್ 2025, 4:24 IST
Last Updated 26 ಜೂನ್ 2025, 4:24 IST
ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆ ಬಳಿ ಮೇಲ್ಭಾಗದಲ್ಲಿ ಚರ್ಚ್‌ ಇರುವ ಗುಡ್ಡದ ಮಣ್ಣು ಕುಸಿಯುತ್ತಿದೆ.
ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆ ಬಳಿ ಮೇಲ್ಭಾಗದಲ್ಲಿ ಚರ್ಚ್‌ ಇರುವ ಗುಡ್ಡದ ಮಣ್ಣು ಕುಸಿಯುತ್ತಿದೆ.   

ಸಕಲೇಶಪುರ: ನಿತ್ಯ 40 ಸಾವಿರ ವಾಹನಗಳು ಸಂಚರಿಸುವ ಹಾಗೂ ರಾಜ್ಯದ ರಾಜಧಾನಿ ಹಾಗೂ ಕರಾವಳಿ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ತಡೆಗೋಡೆಗಳು ಕುಸಿಯುತ್ತಿದ್ದು, ಇದೀಗ ಹೆಗ್ಗದ್ದೆ ಗ್ರಾಮದಲ್ಲಿ ಚರ್ಚ್‌ ಕಟ್ಟಡ, ಬಿಎಸ್‌ಎನ್‌ಎಲ್‌ ಟವರ್ ನೆಲಕ್ಕುರುಳುವ ಆತಂಕ ಎದುರಾಗಿದೆ.

ಹೆಗ್ಗದ್ದೆ ಗ್ರಾಮದಲ್ಲಿ ಇರುವ ಸೆಂಟ್ ಮೇರೀಸ್‌ ಚರ್ಚ್‌ ಹೆದ್ದಾರಿಗಿಂತ ಸುಮಾರು 100 ಅಡಿ ಎತ್ತರದಲ್ಲಿದೆ. ಈ ಚರ್ಚ್‌ ಸುತ್ತಲೂ ಚತುಷ್ಪಥಕ್ಕಾಗಿ ಗುಡ್ಡವನ್ನು ಕತ್ತರಿಸಲಾಗಿದೆ. 100 ಅಡಿ ಎತ್ತರದ ಗುಡ್ಡಕ್ಕೆ ಕೇವಲ 5 ಅಡಿ ಎತ್ತರದ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

‌ಒಂದೇ ಮಳೆಗೆ ಆ ತಡೆಗೋಡೆ ಸಹ ಅಲ್ಲಲ್ಲಿ ಕುಸಿದಿದೆ. ಜೊತೆಗೆ ಮೇಲ್ಬಾಗದಲ್ಲಿ ಚರ್ಚ್‌ ಹಾಗೂ ಚರ್ಚ್‌ನ ಧರ್ಮಗುರುಗಳ ಮನೆ ಇದೆ. ಮನೆಯಿಂದ ಕೇವಲ 10 ಅಡಿ ಅಂತರದಲ್ಲಿ ಗುಡ್ಡ ಕುಸಿದಿದ್ದು, ನಿರಂತರವಾಗಿ ಮಳೆ ಸುರಿದರೆ, ಮನೆ ಹಾಗೂ ಅದರ ಪಕ್ಕದಲ್ಲಿಯೇ ಇರುವ ಚರ್ಚ್‌ ಕಟ್ಟಡಕ್ಕೂ ಹಾನಿ ಆಗುವ ಸಾಧ್ಯತೆಗಳಿವೆ ಎಂದು ಜನರು ಹೇಳುತ್ತಿದ್ದಾರೆ.

ADVERTISEMENT

ಒಂದು ಕಡೆ ಬಿದ್ದರೆ ಚರ್ಚ್‌ ಕಟ್ಟಡಕ್ಕೆ ಹಾನಿಯಾಗುತ್ತದೆ. ಹೆದ್ದಾರಿಯಲ್ಲಿ ಸದಾ ಸಂಚರಿಸುವ ವಾಹನಗಳ ಮೇಲೆ ಬಿದ್ದು ಭಾರಿ ಅನಾಹುತ ಉಂಟಾಗುತ್ತದೆ. ಹೆಗ್ಗದ್ದೆ, ಮಾರನಹಳ್ಳಿ ಭಾಗದ ಮೊಬೈಲ್‌ ಸಂಪರ್ಕವೇ ಕಡಿತವಾಗುತ್ತದೆ ಎಂದು ಗ್ರಾಮದ ರವಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಡಾ. ಫ್ರಾನ್ಸಿಸ್
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರ್ಚ್ ಹಾಗೂ ಮನೆಯ ಕಟ್ಟಡ ಬೀಳುವ ಆತಂಕ ಉಂಟಾಗಿದೆ. ಈಗಾಗಲೆ ಸಾಕಷ್ಟು ಭೂಮಿ ಕುಸಿದಿದ್ದು ಇನ್ನೂ ಕುಸಿಯುವ ಸಾಧ್ಯತೆ ಕಂಡು ಬಂದಿದೆ.
ಡಾ. ಫ್ರಾನ್ಸಿಸ್ ಚರ್ಚ್‌ನ ಫಾದರ್
‘ಟವರ್ ಬೀಳುವ ಆತಂಕ’
ಇದು ಪ್ರಾಕೃತಿಕ ವಿಕೋಪದಿಂದ ಆಗಲಿರುವ ಹಾನಿ ಅಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳ ಯೋಜನೆ ಗುತ್ತಿಗೆದಾರರು ಅವೈಜ್ಞಾನಿಕ ಕಾಮಗಾರಿಯ ಪರಿಣಾಮ. ಚರ್ಚ್‌ಗೆ ಹೊಂದಿಕೊಂಡಂತೆ ಬಿಎಸ್‌ಎನ್‌ಎಲ್‌ ಟವರ್‌ ಹಾಗೂ ಟವರ್‌ನ ಕಂಟ್ರೋಲ್‌ ಕೊಠಡಿ ಸಹ ಇದ್ದು ಕೆಳಭಾಗದಲ್ಲಿ ಭೂಮಿ ಕತ್ತರಿಸಿರುವುದರಿಂದ ಗುಡ್ಡ ಕುಸಿಯುತ್ತಿದೆ. ಇದರಿಂದ ಕಟ್ಟಡದ ತಳಪಾಯವೇ ಸಡಿಲ ಆಗಿದ್ದು ವೇಗವಾಗಿ ಬೀಸುತ್ತಿರುವ ಗಾಳಿ ಹಾಗೂ ಮಳೆಗೆ ಟವರ್ ಬೀಳುವ ಆತಂಕ ಗ್ರಾಮಸ್ಥರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.