ADVERTISEMENT

ಹಾಸನ: ರೈಲ್ವೆ ಹಳಿ ಮೇಲೆ ಶವ ಎಸೆಯಲು ಬಂದಿದ್ದವರು ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 8:02 IST
Last Updated 12 ಅಕ್ಟೋಬರ್ 2022, 8:02 IST
ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬಳಿ ರೈಲ್ವೆ ಹಳಿಯ ಮೇಲೆ ಉರುಳಿದ ಕಾರನ್ನು ಪೊಲೀಸರು ಪರಿಶೀಲಿಸಿದರು
ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬಳಿ ರೈಲ್ವೆ ಹಳಿಯ ಮೇಲೆ ಉರುಳಿದ ಕಾರನ್ನು ಪೊಲೀಸರು ಪರಿಶೀಲಿಸಿದರು   

ಹಾಸನ: ಕೊಲೆ ಮಾಡಿ ಶವವನ್ನು ಶಾಂತಿಗ್ರಾಮ ಬಳಿಯ ರೈಲ್ವೆ ಹಳಿ ಮೇಲೆ ಎಸೆಯಲು ಬಂದಿದ್ದ ವೇಳೆ ಬೊಲೆರೊ ವಾಹನದೊಂದಿಗೇ ಉರುಳಿ ಬಿದ್ದಿದ್ದ, ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಮಧ್ಯಾಹ್ನ ವಶಕ್ಕೆ ಪಡೆದರು.

‘ವಾಹನದಲ್ಲಿದ್ದ ಶವ ಆನಂದ್ ಎಂಬುವವರದ್ದು ಎಂದು ಗುರುತಿಸಲಾಗಿದೆ. ಆನಂದ್‌ ಶಾಂತಿಗ್ರಾಮದ ಗಾಡೇನಹಳ್ಳಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿಗಳು ಡಾಬಾ ಪಕ್ಕದ ಪ್ರದೇಶದ ನಿವಾಸಿಗಳೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

‘ಆಂಧ್ರಪ್ರದೇಶದ ಮೆಹಬೂಬನಗರದ ರಘು, ಗದಗ ಜಿಲ್ಲೆಯ ಶಶಿ, ಹೊಸಕೋಟೆಯ ರವಿಕುಮಾರ್‌, ಬಾಗಲಕೋಟೆಯ ರಾಜಾ ಪಾಷಾ ಬಂಧಿತರು. ಕಾರಿನಲ್ಲಿದ್ದ ಮೊದಲ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ನೀಡಿದ ಮಾಹಿತಿಯಂತೆ ರಾಜಾ ಪಾಷಾನನ್ನು ಬಂಧಿಸಲಾಗಿದೆ’ ಎಂದು ಎಸ್ಪಿ ತಿಳಿಸಿದ್ದಾರೆ.

ADVERTISEMENT

ಆರೋಪಿಗಳು ಮೃತದೇಹವನ್ನು ಕಾರಿನಲ್ಲಿ ತಂದು, ರೈಲ್ವೆ ಹಳಿಯ ಮೇಲೆ ಎಸೆಯಲು ಪ್ರಯತ್ನಿಸುತ್ತಿದ್ದರು. ಆ ವೇಳೆ ಮೇಲಿನಿಂದ ಉರುಳಿದ ಕಾರು, ಶವದ ಸಮೇತ ಹಳಿಯ ಮೇಲೆ ಬಿದ್ದಿತ್ತು. ಸ್ಥಳೀಯರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಕಾರಿನಲ್ಲಿ ಸಿಲುಕಿದ್ದ ಆರೋಪಿಗಳನ್ನು ವಶಕ್ಕೆ ಪಡೆದರು. ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.