ADVERTISEMENT

ಬೇಲೂರು: ಮೂವರು ಮಕ್ಕಳಿಗೆ ವಿಷ ಉಣಿಸಿ, ತಾನೂ ಸೇವಿಸಿದ ತಂದೆ

ಕೌಟುಂಬಿಕ ಕಲಹ: ಪೊಲೀಸರಿಗೆ ದೂರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 15:23 IST
Last Updated 25 ಏಪ್ರಿಲ್ 2019, 15:23 IST
ಬೇಲೂರು ತಾಲ್ಲೂಕು ಎನ್‌.ನಿಡಗೋಡು ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿಷ ಕುಡಿದು ಅಸ್ವಸ್ಥಗೊಂಡ ಬಾಲಕಿಯನ್ನು ಅಂಬುಲೆನ್ಸ್‌ಗೆ ಸಾಗಿಸುತ್ತಿರುವುದು.
ಬೇಲೂರು ತಾಲ್ಲೂಕು ಎನ್‌.ನಿಡಗೋಡು ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿಷ ಕುಡಿದು ಅಸ್ವಸ್ಥಗೊಂಡ ಬಾಲಕಿಯನ್ನು ಅಂಬುಲೆನ್ಸ್‌ಗೆ ಸಾಗಿಸುತ್ತಿರುವುದು.   

ಬೇಲೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೂವರು ಮಕ್ಕಳಿಗೆ ವಿಷ ಕುಡಿಸಿದ ತಂದೆ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಎನ್‌.ನಿಡಗೋಡು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಲೋಕೇಶ್‌ (45), ತನ್ನ ಮಕ್ಕಳಾದ ಸೃಷ್ಟಿ (14), ಸ್ನೇಹಾ (12) ಮತ್ತು ಮಂಜುನಾಥ್‌ (8) ಇವರಿಗೆ ವಿಷಯ ಕುಡಿಸಿದ್ದು, ತಾನೂ ಸೇವಿಸಿ ಸಂಕಟ ತಾಳಲಾರದೆ ಚೀರಾಡುತ್ತಿದ್ದರು. ಚೀರಾಟ ಕೇಳಿದ ಅಕ್ಕಪಕ್ಕದವರು ಮನೆಯೊಳಗೆ ಹೋಗಿ ನಾಲ್ವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಲೋಕೇಶ್‌ ಮತ್ತು ಸೃಷ್ಟಿ ಅವರ ಸ್ಥಿತಿ ಗಂಭೀರವಾಗಿದೆ. ನಾಲ್ವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ವಿವರ: ಇವರು ಕೂಲಿ ಕಾರ್ಮಿಕರಾಗಿದ್ದು, ಪತ್ನಿ ಭಾಗ್ಯಾ ಅವರ ನಡತೆ ಮೇಲೆ ಅನುಮಾನಗೊಂಡ ಲೋಕೇಶ್‌ ನಿತ್ಯ ಜಗಳ ಆಡುತ್ತಿದ್ದನು. ಇದರಿಂದ ಬೇಸತ್ತ ಭಾಗ್ಯಾ ಬೇರೆಡೆ ವಾಸಿಸುತ್ತಿದ್ದರು. ಬುಧವಾರ ಪತ್ನಿಯೊಂದಿಗೆ ಜಗಳವಾಡಿದ್ದ ಲೋಕೇಶ್‌, ಮನಬಂದಂತೆ ಥಳಿಸಿದ್ದು, ಈ ಕುರಿತು ಭಾಗ್ಯಾ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಇದರಿಂದ ಭಯಗೊಂಡ ಲೋಕೇಶ್‌ ತನ್ನ ಮಕ್ಕಳು ತನ್ನಿಂದ ದೂರವಾಗಿ ಪತ್ನಿಯ ಜೊತೆ ಹೋಗಲಿದ್ದಾರೆ ಎಂದು ಈ ಕೃತ್ಯ ಮುಂದಾಗಿದ್ದಾನೆ ಎನ್ನಲಾಗಿದೆ.

ಆಸ್ಪತ್ರೆಗೆ ಸಿಪಿಐ ಲೋಕೇಶ್‌ ಮತ್ತು ಪಿಎಸ್ಐ ಕೆ. ಜಗದೀಶ್‌ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.