ADVERTISEMENT

ಹಾಸನ: ದುಡ್ಡು ಕೊಟ್ಟ್ರು ಕಟ್ಟಿಸಿಕೊಂಡೆವು...

ಕೆ.ಎಸ್.ಸುನಿಲ್
Published 5 ಅಕ್ಟೋಬರ್ 2019, 19:30 IST
Last Updated 5 ಅಕ್ಟೋಬರ್ 2019, 19:30 IST

ಹಾಸನ: ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಬಯಲ ಕಡೆಗೆ ಹೋಗುವುದು ಸಾಮಾನ್ಯವಾಗಿದೆ.

ಹಾಸನದ ಅಮಿರ್‌ ಮೊಹಲ್ಲಾ, ಚಿಪ್ಪಿನಕಟ್ಟೆ, ಶ್ರೀನಗರ, ಸತ್ಯಮಂಗಲ, ರಾಘವೇಂದ್ರ ಕಾಲೊನಿ, ಹುಣಸಿಕೆರೆ ಹಾಗೂ ಕೊಳೇರಿಗಳ ನಿವಾಸಿಗಳು ಶೌಚ ಬಾಧೆ ತೀರಿಸುವುದು ಪೊದೆ, ಕೆರೆ ಅಂಗಳ ಬಯಲು ಪ್ರದೇಶಗಳಲ್ಲಿ, ಈ ಭಾಗದ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ.

ಜಿಲ್ಲೆಯ ಬಹುತೇಕ ಪಟ್ಟಣ, ನಗರ, ಗ್ರಾಮಗಳಲ್ಲಿ ‌ಬಯಲು ಶೌಚಕ್ಕೆ ಹೋಗುತ್ತಿರುವುದು ಕಂಡಬರುತ್ತದೆ. ನಗರದಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲೂ ಶೌಚಾಲಯ ವ್ಯವಸ್ಥೆ ಇದೆ. ಶೌಚಾಲಯ ಕಟ್ಟಿಸಿಕೊಡುವಂತೆ 112 ಅರ್ಜಿಗಳು ನಗರಸಭೆಗೆ ಬಂದಿದ್ದವು. ಈಗ 112 ಮನೆಗಳಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.ದಾಖಲೆ ಪ್ರಕಾರ ಎಲ್ಲಾ ಮನೆಗಳು ಶೌಚಾಲಯ ಹೊಂದಿವೆ.

ADVERTISEMENT

ನಗರದಲ್ಲಿ ಘೋಷಿತ ಕೊಳಗೇರಿಗಳು 15. ಅಘೋಷಿತ ಕೊಳಗೇರಿಗಳು 6. ಅಘೋಷಿತ ಕೊಳಗೇರಿಗಳ ಸ್ಥಿತಿ ಕೇಳುವಂತಿಲ್ಲ. ಇಲ್ಲಿ ನೀರಿನ ಸಮಸ್ಯೆ, ಒಳಚರಂಡಿ ಸಂಪರ್ಕ ಕೊರತೆಯಿಂದ ಶೌಚಗೃಹ ನಿರ್ಮಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ ಮನೆಗಳನ್ನು ಹೊಂದಿರುವ 3,21,000 ಕುಟುಂಬಗಳಿವೆ. ಈ ಎಲ್ಲಾ ಕುಟುಂಬಗಳಿಗೂ ಶೌಚಾಲಯ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ 11,200 ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವ ಗುರಿ ನೀಡಲಾಗಿದ್ದು, ಇದರಲ್ಲಿ 5 ಸಾವಿರ ಕುಟುಂಬಗಳಿಗೆ ಶೌಚಗೃಹ ನಿರ್ಮಿಸಿಕೊಡುವುದು ಬಾಕಿ ಇದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಹಲವು ಕಡೆ ಶೌಚಗೃಹ ನಿರ್ಮಿಸಿದ್ದರೂ ಅವುಗಳನ್ನು ದನದ ಕೊಟ್ಟಿಗೆ ಮಾಡಿಕೊಳ್ಳಲಾಗಿದೆ. ಕೆಲವು ಕಡೆ ಗೋದಾಮು ಮಾಡಿಕೊಳ್ಳಲಾಗಿದೆ. ಕೃಷಿ ಸಲಕರಣೆ, ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಇಡಲಾಗುತ್ತಿದೆ.

‘‘ಸರ್ಕಾರ ₹ 15 ಸಾವಿರ ಕೊಟ್ಟಿದ್ದಕ್ಕೆ ಕಟ್ಟಿಸಿಕೊಂಡಿದ್ದೀವಿ. ಶೌಚಾಲಯ ಇದೆಯೆಲ್ಲಾ, ನಿಧಾನಕ್ಕೆ ಬಳಸ್ತಿವಿ ಮೇಡಂ ಎಂದು ಗ್ರಾಮೀಣ ಮಹಿಳೆಯರು ಹೇಳುತ್ತಾರೆ. ಅರಿವಿನ ಕೊರತೆಯಿಂದ ಶೌಚಗೃಹ ಇದ್ದರೂ ಬಳಕೆ ಮಾಡುತ್ತಿಲ್ಲ. ಬೀದಿ ನಾಟಕ, ಜಾಥಾ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.