ಹೆತ್ತೂರು: ಗ್ರಾಮ ಸಭೆಗೆ ಕೇವಲ ಮೂರು ಇಲಾಖೆಯ ಅಧಿಕಾರಿಗಳು ಹಾಜರಾಗಿದ್ದು, ಪಂಚಾಯಿತಿ ಕೆಲ ಸದಸ್ಯರೂ ಗೈರು ಹಾಜರಾಗಿರುವುದನ್ನು ಖಂಡಿಸಿದ ಗ್ರಾಮಸ್ಥರು, ಗ್ರಾಮ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು.
ಶುಕ್ರವಾರ ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ನಾಗರಾಜ್ ಹಳ್ಳಿಬೈಲು ಅಧ್ಯಕ್ಷತೆಯಲ್ಲಿ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಆಯೋಜನೆ ಬಗ್ಗೆ ತಾಲ್ಲೂಕಿನ ಆಡಳಿತದ 57 ಇಲಾಖೆಗೆ ಮಾಹಿತಿ ಕೊಡಲಾಗಿತ್ತು. ಆದರೆ ಕೇವಲ ಮೂರು ಇಲಾಖೆಯವರು ಮಾತ್ರ ಹಾಜರಿದ್ದು, ಗ್ರಾಮ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಇಲಾಖೆಯಿಂದ ಮಾಹಿತಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮಸ್ಯೆ ಯಾರಿಗೆ ಹೇಳುವುದು? ಯಾರಿಂದ ಮಾಹಿತಿ ಪಡೆದುಕೊಳ್ಳುವುದು ಎಂದು ಸಭೆಯಲ್ಲಿ ಹಾಜರಾಗಿದ್ದ ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಬಹಿಷ್ಕಾರ ಮಾಡಿದರು. ಬೇಜವಾಬ್ದಾರಿ ಮೆರೆದ ಅಧಿಕಾರಿಗಳಿಗೆ, ಸದಸ್ಯರಿಗೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟಿಸಿದರು.
ಗ್ರಾಮ ಸಭೆಯಲ್ಲಿ ರೈತರಿಗೆ ಸರ್ಕಾರದ ಇಲಾಖೆಯಿಂದ ಸಿಗುವ ಅನುಕೂಲಗಳು ಹಾಗೂ ರೈತರ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ವೇದಿಕೆ ಸಿಗುತ್ತದೆ ಎಂದು ರೈತರು ತಮ್ಮೆಲ್ಲ ಕೆಲಸ ಬಿಟ್ಟು ಬಂದಿರುತ್ತಾರೆ. ಆದರೆ, ನಾವು ಆಯ್ಕೆ ಮಾಡಿ ಕಳುಹಿಸಿದ ಸದಸ್ಯರು, ಯಾವ ಇಲಾಖೆಯವರು ಬರದೇ ಬೇಜವಾಬ್ದಾರಿಯಿ೦ದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆತಂದು ಸ್ಥಳದಲ್ಲಿ ಸಮಸ್ಯೆಯನ್ನು ಪರಿಹರಿಸಿ. ನಂತರ ಗ್ರಾಮ ಸಭೆ ನಡೆಯಬೇಕು ಎಂದು ಮುಖಂಡ ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಕೃಷಿಕ ಸಮಾಜ ನಿರ್ದೇಶಕ ಮೋಹನ್ ಕುಮಾರ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗಭೂಷಣ್, ರಕ್ಷಣಾ ವೇದಿಕೆ ರೈತ ಘಟಕ ಹೋಬಳಿ ಅಧ್ಯಕ್ಷ ಕವನಗೌಡ, ದಿವಕರ್, ಕುಶಾ, ಮೆಕ್ಕೀರಮನೆ ಕುಶಾಲಪ್ಪ, ಪಟೇಲ್ ಪ್ರೇಮಾನಂದ್, ರವಿಕುಮಾರ್ ಕಿರ್ಕಳ್ಳಿ, ಧರ್ಮ ರಾಜ್, ಕೃಷ್ಣಮೂರ್ತಿ, ಬೆಳ್ಳಿಯಪ್ಪ, ವೇದಮೂರ್ತಿ, ತಮ್ಮೇಗೌಡ ಕೊಣಬನಹಳ್ಳಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.