ಶ್ರವಣಬೆಳಗೊಳ: ಇಲ್ಲಿಯ ವಿಂಧ್ಯಗಿರಿ ಬಾಹುಬಲಿ ಬೆಟ್ಟದ ಒದೆಗಲ್ ಬಸದಿಯಲ್ಲಿ ವಿರಾಜಮಾನರಾದ ಪ್ರಥಮ ತೀರ್ಥಂಕರರಾದ ಭಗವಾನ್ ಆದಿನಾಥ ಸ್ವಾಮಿಯ ಮೋಕ್ಷ ಕಲ್ಯಾಣ ನಿಮಿತ್ತ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳು ಬುಧವಾರ ನಡೆದವು.
ವೃಷಭನಾಥ ಸ್ವಾಮಿಯ ಜಿನರಾತ್ರಿಯ ಪ್ರಯುಕ್ತ ಬೆಳಿಗ್ಗೆ ತೀರ್ಥಂಕರರ ಸನ್ನಿಧಿಯಲ್ಲಿ ನವ ಕಲಶಗಳನ್ನು ಪ್ರತಿಷ್ಠಾಪಿಸಿ, ನಂತರ ಜಲ, ಎಳನೀರು, ಕಾಯಿತುರಿ, ಬಾಳೆಹಣ್ಣು, ಹೆಸರು ಬೇಳೆ, ಕಡಲೆಬೇಳೆ, ಬೆಲ್ಲ, ಸಕ್ಕರೆ, ತುಪ್ಪ, ಹಾಲು, ಅಕ್ಕಿ ಹಿಟ್ಟು, ಅರಿಸಿನ, ಅಷ್ಟಗಂಧ, ಶ್ರೀಗಂಧ, ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು.
ಪುಷ್ಪವೃಷ್ಠಿ ಆದ ನಂತರ ಮಹಾ ಮಂಗಳಾರತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಮಹಾಶಾಂತಿ ಧಾರವನ್ನು ನೆರವೇರಿಸಲಾಯಿತು. ಭಕ್ತಾದಿಗಳಿಗೆ ಶ್ರೀಫಲ, ಗಂಧೋದಕ ವಿತರಿಸಲಾಯಿತು.
ಪಟ್ಟಣದ ಬ್ರಹ್ಮಸೂರಯ್ಯ ಅಣ್ಣಯ್ಯ ಕುಟುಂಬದವರಾದ ಪುಷ್ಪಲತಾ ಪದ್ಮಕುಮಾರ ಪೂಜೆಯ ಸೇವಾಕರ್ತರಾಗಿದ್ದು, ಪೂಜೆಯ ನೇತೃತ್ವವನ್ನು ರಾಜೇಂದ್ರ, ಪುನೀತ್, ನಿಖಿಲ್ ವಹಿಸಿದ್ದರು.
ಮಣಿಕಂಠ ಮತ್ತು ತಂಡದವರಿಂದ ಮಂಗಲ ವಾದ್ಯಗೋಷ್ಠಿ ನೆರವೇರಿತು. ಜಿನರಾತ್ರಿಯ ನಿಮಿತ್ತ ವಿಂಧ್ಯಗಿರಿಯ ಕೋಟೆಯ ಮುಂಭಾಗ, ಮತ್ತು ಒದೆಗಲ್ ಬಸದಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪ್ರಾಕೃತ ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರಕುಮಾರ್, ಎಸ್.ಎನ್.ಜ್ವಾಲಣ್ಣ, ಅನಂತಪದ್ಮನಾಭ್, ಶುಭಚಂದ್ರ, ಪ್ರಸನ್ನಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.