ADVERTISEMENT

ಹಾಸನ: ಹೇಮಾವತಿ ಜಲಾಶಯದಿಂದ ಆ.9 ರಿಂದ ಸೆ.12 ರವರೆಗೆ ನಾಲೆಗೆ ನೀರು

ಕುಡಿಯಲು, ಕೆರೆ ತುಂಬಿಸಲು ಮಾತ್ರ ಬಳಕೆ: ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 13:09 IST
Last Updated 8 ಆಗಸ್ಟ್ 2023, 13:09 IST
   

ಹಾಸನ: ‘ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ಆಗಸ್ಟ್‌ 9 ರಿಂದ ಸೆ.12 ರವರೆಗೆ ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಈ ನೀರನ್ನು ಕುಡಿಯುವ ಉದ್ದೇಶದಿಂದ ಮಾತ್ರ ಬಳಕೆ ಮಾಡಬೇಕು’ ಎಂದು ಹೇಮಾವತಿ ಜಲಾಶಯ ಯೋಜನೆ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಹೇಮಾವತಿ ಯೋಜನಾ ವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ.ಎನ್. ನಳಿನಿ ತಿಳಿಸಿದ್ದಾರೆ.

‘ಹೇಮಾವತಿ ಜಲಾಶಯಕ್ಕೆ ಪ್ರಸಕ್ತ ವರ್ಷ ನೀರಿನ ಒಳ ಹರಿವು ನಿರಾಶದಾಯವಾಗಿದ್ದು, ನೀರಿನ ಅಭಾವ ನೀಗಿಸಿಕೊಳ್ಳಲು ಜಲಾಶಯದಲ್ಲಿರುವ ನೀರಿನ ಲಭ್ಯತೆಯನ್ನು ಅನುಸರಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾಗೂ ಕೆರೆಗಳಿಗೆ ನೀರನ್ನು ತುಂಬಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಹೇಳಿದ್ದಾರೆ.

‘35 ದಿನಗಳ ಕಾಲ ಹೇಮಾವತಿ ಎಡದಂಡೆ ಮತ್ತು ಬಲದಂಡೆ ಹಾಗೂ ಬಲ ಮೇಲ್ದಂಡೆ ನಾಲೆಗಳಲ್ಲಿ ನೀರು ಹರಿಸಲಾಗುವುದು. ಈ ನೀರನ್ನು ನಿಗದಿತ ಉದ್ದೇಶಕ್ಕಾಗಿಯೇ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ನಾಲಾ ನೀರನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು’ ಎಂದು ಸೂಚನೆ ನೀಡಿದ್ದಾರೆ.

ADVERTISEMENT

‘ಒಂದು ವೇಳೆ ರೈತರು ಇಚ್ಚಿಸಿದಲ್ಲಿ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯಲು ಅಭ್ಯಂತರವಿಲ್ಲ. ಸೂಚನೆಯನ್ನು ಮೀರಿ ನಾಲಾ ನೀರನ್ನು ಉಪಯೋಗಿಸಿಕೊಂಡು ನೀರಾವರಿ ಬೆಳೆ ಬೆಳೆಯಲು ರೈತರು ಪ್ರಯತ್ನಿಸಿದಲ್ಲಿ, ಆಗಬಹುದಾದ ನಷ್ಟಕ್ಕೆ ಇಲಾಖೆ ಜವಾಬ್ದಾರಿ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.