ಹಾಸನ: ನಗರದ ವಿದ್ಯಾನಗರ ಬಡಾವಣೆಯಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದ ವಾಗಿ ಸೋಮವಾರ ಮೃತಪಟ್ಟಿದ್ದಾರೆ.
ರಂಜಿತಾ (31) ಮೃತಪಟ್ಟವರು. 10 ವರ್ಷದ ಹಿಂದೆ ಹೊಳೆನರಸೀಪುರ ತಾಲ್ಲೂಕು ಪಡುವಲಹಿಪ್ಪೆ ಗ್ರಾಮದ ರಂಜಿತಾ ಮತ್ತು ವಿದ್ಯಾನಗರ ನಿವಾಸಿ ಅಕ್ಷಯ್ ಎಂಬುವರ ನಡುವೆ ಮದುವೆಯಾಗಿತ್ತು. ರಂಜಿತಾ ಹಾಸನ ಡೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ ಮದುವೆಯಾಗಿ ದಶಕ ಕಳೆದಿದ್ದರೂ, ದಂಪತಿಗೆ ಮಕ್ಕಳಾಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಅಕ್ಷಯ್ ಕುಟುಂಬ ಸದಸ್ಯರು ರಂಜಿತಾಗೆ ಹಿಂಸೆ ಕೊಡುತ್ತಿದ್ದರು. ಅಲ್ಲದೇ, ವರದಕ್ಷಿಣೆಗೆ ಪೀಡಿಸುತ್ತಿದ್ದರು. ಮಾವ ಅಶೋಕ್ ಸಹ ರಂಜಿತಾಗೆ ತೊಂದರೆ ಕೊಡುತ್ತಿದ್ದರು. ಕೊಲೆ ಮಾಡಿ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಹೆಣ ಇರಿಸಿದ್ದಾರೆಂದು ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಈ ಹಿಂದೆ ಜಗಳ ತೆಗೆದು ಹಲ್ಲೆ ಮಾಡಿದ್ದರು. ಈ ಬಗ್ಗೆ ರಂಜಿತಾ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ರಾಜಿ ಪಂಚಾಯಿತಿ ನಡೆದಿತ್ತು. ಆದರೂ ಸಂಸಾರ ಸರಿಹೋಗಿರಲಿಲ್ಲ ಎಂದು ಸಂಬಂಧಿಕರು ಹೇಳಿದರು.
ಗಂಡನ ಮನೆಯವರೇ ರಂಜಿತಾಳನ್ನು ಹತ್ಯೆಮಾಡಿ ನಂತರ ನೇಣುಹಾಕಿದ್ದಾರೆ ಎಂದು ಕೋಪಗೊಂಡ ಕೆಲವರು, ಗಂಡನ ಮನೆ ಎದುರಿನ ಹೂ ಕುಂಡಗಳನ್ನು ಒಡೆದು ತಮ್ಮ ಸಿಟ್ಟು ಹೊರ ಹಾಕಿದರು. ಎರಡು ಕುಟುಂಬಗಳ ನಡುವೆ ಜಗಳ ಸಹ ನಡೆಯಿತು. ಇದರಿಂದ ಕೆಲಹೊತ್ತು ಬಿಗುವಿನ ವಾತವರಣ ನಿರ್ಮಾಣವಾಗಿತ್ತು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಡಾವಣೆ ಠಾಣೆ ಇನ್ಸ್ಪೆಕ್ಟರ್ ಕೃಷ್ಣರಾಜು ಹಾಗೂ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.