ಹಾಸನ: ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸಲು ರೂಪಿಸಿರುವ ಎತ್ತಿನಹೊಳೆ ಯೋಜನೆಯ ನೀರು ಜಿಲ್ಲೆಯ ಅರಸೀಕೆರೆ ತಾಲ್ಲೂಕನ್ನೇ ತಲುಪಿಲ್ಲ. ತನಗೆ ಸೇರಿದ ಜಾಗದಲ್ಲಿ ಕಾಲುವೆ ನಿರ್ಮಿಸಲು ಅರಣ್ಯ ಇಲಾಖೆ ತಕರಾರು ಎತ್ತಿದ್ದು, ‘ಈ ಬಾರಿಯ ಮಳೆಗಾಲದಲ್ಲೂ ಯೋಜನೆಯ ನೀರು ವ್ಯರ್ಥವಾಗಿ ಹಳ್ಳ ಸೇರಲಿದೆ’ ಎಂಬ ಆತಂಕ ಮನೆ ಮಾಡಿದೆ.
ಸಕಲೇಶಪುರ ತಾಲ್ಲೂಕಿನ 8 ಕಡೆಗಳಲ್ಲಿ ವೀಯರ್ (ಚೆಕ್ಡ್ಯಾಂ)ಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತಿದೆ. ಅದನ್ನು ಪೈಪ್ಲೈನ್ ಮೂಲಕ ಆಲೂರು, ಬೇಲೂರು, ಅರಸೀಕೆರೆ ತಾಲ್ಲೂಕುಗಳ ಮೂಲಕ ತುಮಕೂರು ಜಿಲ್ಲೆಗೆ ಹರಿಸಲಾಗುತ್ತಿದೆ. ಆದರೆ, ಬೇಲೂರು ತಾಲ್ಲೂಕಿನ ಐದಳ್ಳ ಕಾವಲು ಬಳಿ ಅರಣ್ಯ ಇಲಾಖೆಯ ಜಾಗದಲ್ಲಿ ಕಾಲುವೆ ನಿರ್ಮಾಣಕ್ಕೆ ತೊಂದರೆ ಎದುರಾಗಿದೆ.
ಕಳೆದ ಬಾರಿ ಯೋಜನೆಯ ಮೂಲಕ ಹರಿದ ನೀರು, ತೋಟಗಳಿಗೆ ನುಗ್ಗಿ, ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ನೀರು ಎತ್ತುವುದನ್ನು ನಿಲ್ಲಿಸಲಾಗಿತ್ತು. ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ಕಾಲುವೆ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಈ ಬಾರಿಯೂ ನೀರು ವ್ಯರ್ಥವಾಗಿ ಹರಿಯಲಿದೆ.
ವಾಣಿ ವಿಲಾಸ ಸೇರದ ನೀರು: ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಯೋಜನೆಯ ನೀರನ್ನು ಸದ್ಯಕ್ಕೆ ವೇದಾವತಿ ವ್ಯಾಲಿಯ ಮೂಲಕ ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ಹರಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ, ಕಳೆದ ಬಾರಿ ಎತ್ತಿದ 1.5 ಟಿಎಂಸಿ ನೀರು ಸೇರಿದ್ದು ಮಾತ್ರ ರೈತರ ತೋಟಗಳು, ಕೆರೆಗಳಿಗೆ.
‘ಕೋಟ್ಯಂತರ ರೂಪಾಯಿ ವ್ಯಯಿಸಿ ವೀಯರ್ಗಳು, ವಿದ್ಯುತ್ ಕೇಂದ್ರ, ಪೈಪ್ಲೈನ್ ಅಳವಡಿಸಲಾಗಿದೆ. ಅವುಗಳನ್ನು ಉಪಯೋಗಿಸಿಕೊಳ್ಳದಿದ್ದರೆ ಹಾಳಾಗುತ್ತವೆ. ಹಾಗಾಗಿ ಈ ಬಾರಿಯೂ ಪೈಪ್ಲೈನ್ನಲ್ಲಿ ನೀರು ಹರಿಸಲಾಗುವುದು. ಆದರೆ, ಈ ನೀರು ವ್ಯರ್ಥವಾಗಲಿದೆ ಎನ್ನುವುದು ಅಷ್ಟೇ ಸತ್ಯ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಯೋಜನೆಯ ಎಂಜಿನಿಯರ್ ತಿಳಿಸಿದರು.
ಸೆಪ್ಟೆಂಬರ್ 6 ರಂದು ಮೊದಲನೇ ಹಂತದ ಕಾಮಗಾರಿ ಉದ್ಘಾಟನೆ 24 ಟಿಎಂಸಿ ಬದಲು ಕೇವಲ 1.5 ಟಿಎಂಸಿ ನೀರು ಲಭ್ಯ
ಅರಣ್ಯ ಇಲಾಖೆ ಭೂಮಿ ಕೊಡದೇ ಇರುವುದರಿಂದ ಬೇಲೂರು- ಅರಸೀಕೆರೆಗೆ ನೀರು ಹರಿಯಲು ತೊಡಕಾಗಿದೆ. ಐದಳ್ಳ ಕಾವಲು ಬಳಿ ಭೂಮಿ ಒದಗಿಸಿದರೆ ಡಿಸಿಎಫ್ ಅವರನ್ನು ಸನ್ಮಾನಿಸಲಾಗುವುದುಕೆ.ಎಂ. ಶಿವಲಿಂಗೇಗೌಡ ಶಾಸಕ
ಅರಣ್ಯ ಇಲಾಖೆಗೆ ಭೂಸ್ವಾಧೀನ ಮಾಡಲು 168 ಹೆಕ್ಟೇರ್ ಜಮೀನು ಗುರುತಿಸಿದ್ದು ಜಂಟಿ ಸರ್ವೆ ಮಾಡಿ ಕೇಂದ್ರಕ್ಕೆ ವರದಿ ನೀಡಲಾಗುವುದು. ಅನುಮತಿ ಬಂದರೆ ಯೋಜನೆ ಕಾರ್ಯಗತ ಮಾಡಬಹುದುಸೌರಭ್ಕುಮಾರ್ ಹಾಸನ ಡಿಸಿಎಫ್
ಸಾಕಾರದ ಬದಲು ವ್ಯರ್ಥ
‘ಎತ್ತಿನಹೊಳೆ ಯೋಜನೆಯಿಂದ ನೀರು ವ್ಯರ್ಥವಾಗುತ್ತಿದೆಯೇ ಹೊರತು ಸದುಪಯೋಗ ಆಗುತ್ತಿಲ್ಲ’ ಎನ್ನುವ ಮಾತುಗಳು ಪರಿಸರವಾದಿಗಳಿಂದ ಕೇಳಿ ಬರುತ್ತಿವೆ. ‘ಇದು ಅವೈಜ್ಞಾನಿಕ ಯೋಜನೆ ನದಿ ಮೂಲ ನಾಶವಾಗುತ್ತದೆ ಎಂದು ಪ್ರಾರಂಭದಲ್ಲಿಯೇ ಹೇಳಿದ್ದೆವು. ಕೇವಲ 5–6 ಟಿಎಂಸಿ ಮಾತ್ರ ಸಿಗಲಿದೆ. ಇದು ಸಾಕಾಗುವುದಿಲ್ಲ ಎಂದು ಶರಾವತಿ ನೀರು ಸೇರಿಸಲು ಹೊರಟಿದ್ದಾರೆ. ಯೋಜನೆ ವಿಸ್ತರಿಸಿ ಗಿರಿಹೊಳೆ ಅಡ್ಡಹೊಳೆ ಸೇರಿಸಲು ಮುಂದಾಗಿದ್ದಾರೆ. ಮತ್ತಷ್ಟು ಅರಣ್ಯ ನಾಶವಾಗಲಿದ್ದು ಆನೆ– ಮಾನವ ಸಂಘರ್ಷ ವಿಪರೀತವಾಗಲಿದೆ’ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.