ADVERTISEMENT

`ಒಳ ಪಂಗಡಗಳು ಒಂದಾಗಬೇಕು'

ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 7:22 IST
Last Updated 17 ಡಿಸೆಂಬರ್ 2012, 7:22 IST

ರಾಣೆಬೆನ್ನೂರು: `ವೀರಶೈವ ಸಮಾಜದ ಎಲ್ಲ ಉಪ ಪಂಗಡಗಳು ಒಂದಾಗಬೇಕು. ಇದಕ್ಕೆ ಎಲ್ಲ ಮಠಾಧೀಶರು ಸಮಾಜದ ಮುಖಂಡರಿಗೆ ಮಾರ್ಗದರ್ಶನ ಮಾಡಬೇಕು. ಬಸವಣ್ಣ ಲಿಂಗಾಯತ ಸಮಾಜಕ್ಕೆ ಅಷ್ಟೇ ಸೀಮಿತವಾಗಿಲ್ಲ. ಎಲ್ಲ ಸಮಾಜಕ್ಕೂ ಬೇಕಾದವವರು' ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ  ಡಾ. ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.

ನಗರದ ಮೇಡ್ಲೇರಿ ರಸ್ತೆಯ ಆಂಗ್ಲೋ ಉರ್ದು ಪ್ರೌಢ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆ ದೂರವಾಗಿ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು. ವೀರಶೈವ ಘಟಕ ಒಂದು ಗೂಡಬೇಕು. ಎಲ್ಲರೂ ದಾನದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಸಮಾಜದಲ್ಲಿ ದಾನ ಮಾಡುವುದರಿಂದ ಸಂಪತ್ತು ದ್ವಿಗುಣವಾಗುತ್ತದೆ. ತನ್ಮೂಲಕ ಸಮಾಜದ ಋಣ ತೀರಿಸಲು ಮುಂದಾಗಬೇಕು ಎಂದು ಶಿವಶಂಕರಪ್ಪ ಸಲಹೆ  ನೀಡಿದರು. ವೀರಶೈವ ಮಹಾಸಭೆಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ತಾಲ್ಲೂಕು ಘಟಕಕ್ಕೆ ನಗರಸಭೆಯಿಂದ ನಿವೇಶನ ಪಡೆದು ವಸತಿ ನಿಲಯ ಆದಷ್ಟು ಬೇಗನೆ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಧಾರವಾಡದ ಕವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಪಂಚಾಕ್ಷರಿ ಹಿರೇಮಠ ಹಾಗೂ ಮಂಗಳೂರಿನ ಮೌಲಾನಾ ಅಬು ಸುಫಿಯಾನ್ ಮದನಿ ಉಪನ್ಯಾಸ ನೀಡಿದರು. ದಾವಣಗೆರೆ ವಿವಿ ಕುಲಪತಿ ಡಾ. ಇಂದುಮತಿ ಅವರು ಭಕ್ತಿ ಭಂಡಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಪ್ರೊ.ಅ.ಸಿ. ಹಿರೇಮಠ ಅವರು ಗ್ರಂಥ ಪರಿಚಯ ಮಾಡಿದರು.

ಹೊನ್ನಳಿ ಒಡೆಯರ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಗದಗ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ನರಸೀಪುರದ ಶಾಂತಮುನಿ ಸ್ವಾಮೀಜಿ, ವೇಮಾನಂದ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ, ಅಣಬೇರು ರಾಜಣ್ಣ, ಎಂ.ಎಸ್. ಅರಕೇರಿ, ಅಮೀರ್ ಅಹ್ಮ ದ್ ನಾರಂಗಿ, ಶೋಭಾತಾಯಿ ಮಾಗಾವಿ, ಆರ್. ಶಂಕರ್, ಗಾಯತ್ರಮ್ಮ ಕುರುವತ್ತಿ, ಕೆ.ಎಂ. ಬಂದಮ್ಮನವರ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೆ. ಶಿವಲಿಂಗಪ್ಪ, ನಗರಸಭಾ ಸದಸ್ಯ ಮಂಜುನಾಥ ಗೌಡಶಿವಣ್ಣನವರ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ಜಂಬಿಗಿ,  ಬಿ.ಎಂ. ಜಯದೇವ, ಡಾ. ಮೋಹನ ಹಂಡೆ, ವಿಶ್ವನಾಥ ಜಂಬಗಿ, ಇಂದಿರಾ ಗಡ್ಡದಗೂಳಿ, ವಾಸಣ್ಣ ಕುಸಗೂರ, ಕರಬಸಪ್ಪ ಮಾಕನೂರು, ಸಿದ್ದಣ್ಣ ಅಡಿವೇರ, ಪ್ರಭು ಕರ್ಜಿಗಿಮಠ ಮತ್ತಿತರರು ಉಪಸ್ಥಿತರ‌್ದಿದರು.

ಕೋರಧಾನ್ಯಮಠ ಸ್ವಾಗತಿಸಿದರು. ಡಾ.ಎಸ್.ಬಿ. ಮಲ್ಲೂರು ಮತ್ತು ಶಿವಯೋಗಿ ಕಂಬಾಳಿಮಠ  ನಿರೂಪಿಸಿದರು. ಚಂದ್ರಣ್ಣ ಸೊಪ್ಪಿನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT