ADVERTISEMENT

`ನೀರಾವರಿ ಯೋಜನೆಯಲ್ಲಿ ಅವ್ಯವಹಾರ'

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:59 IST
Last Updated 20 ಏಪ್ರಿಲ್ 2013, 10:59 IST

ಶಿಗ್ಗಾವಿ: `ತಾಲ್ಲೂಕಿನ ರೈತರ ಜಮೀನಿಗೆ ಹಸಿರು ಸೀರೆ ಉಡಿಸುವುದಾಗಿ ಹೇಳಿದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಈ ಯೋಜನೆ ಜಾರಿಗೊಳಿಸುವ ಮೂಲಕ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ'  ಎಂದು ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಜ್ಜಂಪೀರ್ ಖಾದ್ರಿ ಆರೋಪಿಸಿದರು.

ತಾಲ್ಲೂಕಿನ ಬನ್ನೂರ ಗ್ರಾಮದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.

`ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ನೀಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಡವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಇಲ್ಲ. ತಾಲ್ಲೂಕಿನ ಎಲ್ಲ ಇಲಾಖೆಗಳಲ್ಲಿ ಲಂಚಗುಳಿತನ ಹೆಚ್ಚಾಗಿದ್ದು, ಸಾರ್ವಜನಿಕರು ಬೇಸತ್ತಿದ್ದಾರೆ' ಎಂದು ಆರೋಪಿಸಿದರು.

ಬನ್ನೂರು ಗ್ರಾಮದ ಹಿರಿಯ ಬಸವನಗೌಡ ದುಂಡಿಗೌಡ್ರ ಮಾತನಾಡಿದರು. ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ, ಪ್ರದೀಪಕುಮಾರ ಗಿರಡ್ಡಿ, ಎನ್.ಸಿ.ಪಾಟೀಲ, ಹನುಮರೆಡ್ಡಿ ನಡುವಿನಮನಿ, ಗುಡ್ಡಪ್ಪ ಜಲದಿ, ಬಸವಣ್ಣೆಪ್ಪ ಅಂಗಡಿ, ಬಸವರಾಜ ಕೆಂಪಬಸಪ್ಪನವರ, ಶೇಖಣ್ಣ ಗಣಾಚಾರಿ, ಪ್ರಕಾಶ ಹಾದಿಮನಿ, ಪ್ರಕಾಶ ಬಂಕಣ್ಣವರ, ಸುಧೀರ್ ಲಮಾಣಿ. ಶಂಭು ಅಜೂರ, ಕುಬೇರಗೌಡ ಪೊಲೀಸ್‌ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಬೊಮ್ಮಾಯಿ ಮತಯಾಚನೆ
ಶಿಗ್ಗಾವಿ: ಪಟ್ಟಣದ ಜಯನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅರ್ಜುನ ಹಂಚಿನಮನಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸೇರಿದ ಮುಖಂಡರನ್ನು ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.

ಮಾರುತಿ ಭಜಂತ್ರಿ, ದೇವಣ್ಣ ಚಾಕಲಬ್ಬಿ, ಪುರಸಭೆ ಸದಸ್ಯರಾದ ಶಿವಪ್ರಸಾದ ಸುರಗಿಮಠ, ಸುಭಾಷ್ ಚವಾಣ, ಫಕ್ಕೀರೇಶ ಶಿಗ್ಗಾವಿ, ರಾಮು ಪೂಜಾರ, ವಿಜಯ ಬುಳಕ್ಕನವರ, ಕರೆಪ್ಪ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.