ಸವಣೂರ: ಕಲಿಕಾ ಹಂತದಲ್ಲಿಯೇ ಮಕ್ಕಳ ಅಭಿರುಚಿಯನ್ನು ಗುರ್ತಿಸಬೇಕು. ಅದಕ್ಕೆ ಪೂರಕವಾದ ಶಿಕ್ಷಣವನ್ನು ಪಾಲಕರು ಹಾಗೂ ಶಿಕ್ಷಕರು ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಡಾ. ಶೋಭಾ ನಿಸ್ಸೀಮಗೌಡ್ರ ತಿಳಿಸಿದರು. ಸವಣೂರಿನ ಸರ್ಕಾರಿ ಮಜೀದ ಪ್ರೌಢಶಾಲೆಯಲ್ಲಿ ಜರುಗಿದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮ್ಮಿಶ್ರಣದೊಂದಿಗೆ ವಾತಾವರಣ ಉತ್ಸಾಹದಾಯಕವಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ರುದ್ರಗೌಡ ಪಾಟೀಲ, ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ಪ್ರತಿಭಾಕಾರಂಜಿ ಉತ್ತಮ ಕಾರ್ಯಕ್ರಮವಾಗಿದೆ. ಪ್ರತಿಭೆಯ ಅನ್ವೇಷಣೆಯಲ್ಲಿ ವಯಕ್ತಿಕ ಹಿತಾಸಕ್ತಿ ತೊಡಕಾಗಬಾರದು ಎಂದರು.
ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಜಿ.ಪಂ ಸದಸ್ಯ ಕೃಷ್ಣಾ ಸುಣಗಾರ ಹಾಗೂ ಪುರಸಭೆ ಉಪಾಧ್ಯಕ್ಷ ಶಿವಪ್ಪ ಜಡಿ, ಮಕ್ಕಳಿಗೆ ಶುಭ ಹಾರೈಸಿದರು.
ಸಮನ್ವಯಾಧಿಕಾರಿ ಎಚ್.ಎಂ ಪಡ್ನೇಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವಶಿಕ್ಷಣ ಅಭಿಯಾನದ ಆಶಯಗಳನ್ನು ವಿವರಿಸಿದರು. ಪ್ರಾಚಾರ್ಯ ಎಂ.ಎ ನದಾಪ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ ಮಾಳಗಿಮನಿ, ದೈಹಿಕ ಶಿಕ್ಷಕ ಶಂಬಣ್ಣ ಕೋರಿ, ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಆರ್ ನವಲೆ, ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್ ಈಳಗೇರ, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಶಾಂತಗಿರಿ, ಶಿಕ್ಷಣ ಸಂಯೋಜಕ ಎಲ್.ಆರ್ ದಾಸರ ನಿವೃತ್ತ ಶಿಕ್ಷಕರಾದ ಸಿ.ಜಿ ಚೂರಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.