ADVERTISEMENT

ಮುಂದುವರಿದ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:14 IST
Last Updated 11 ಡಿಸೆಂಬರ್ 2013, 6:14 IST
ಹಾನಗಲ್‌ ಕೆಸಿಸಿ ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಯ ಆಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಬ್ಯಾಂಕ್‌ ಎದುರಿನಲ್ಲಿ ರೈತರು ಧರಣಿ ನಡೆಸಿದರು.
ಹಾನಗಲ್‌ ಕೆಸಿಸಿ ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಯ ಆಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಬ್ಯಾಂಕ್‌ ಎದುರಿನಲ್ಲಿ ರೈತರು ಧರಣಿ ನಡೆಸಿದರು.   

ಹಾನಗಲ್‌:ಬೆಳೆವಿಮೆ ಪರಿಹಾರವನ್ನು ಕೃಷಿ ಪತ್ತಿನ ಸಂಘಗಳ ಮೂಲಕವೇ ವಿತರಿಸಬೇಕೆಂಬ ರೈತರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಬೇಡಿಕೆಗಳಿಗೆ ಯಾವ ಸ್ಪಂದನೆಯೂ ದೊರಕದಿದ್ದ ಪರಿಣಾಮ ಇಲ್ಲಿನ ಕೆಸಿಸಿ ಬ್ಯಾಂಕ್‌ಗೆ ಮಂಗಳವಾರವೂ ಬೀಗ ಜಡಿಯಲಾಗಿದೆ.

ಸೋಮವಾರ ಇಡೀ ದಿನ ಬ್ಯಾಂಕ್‌ನ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸುವ ಕೆಲಸವಾಗಿಲ್ಲ. ಸಂಜೆಗೆ ತಹಶೀಲ್ದಾರ್‌ ಕಚೇರಿಗೆ ರೈತರ ನಿಯೋಗ ತೆರಳಿ ಸಮಸ್ಯೆ ಇತ್ಯರ್ಥಕ್ಕೆ ಚರ್ಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ನಾಗೇಂದ್ರ ಹೊನ್ನಳ್ಳಿ ಅವರು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈಗಿನ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ವಿತಂಡವಾದದಿಂದ ಪ್ರತಿಭಟನೆಯನ್ನು ಮುಂದುವರೆಸಲಾಗಿದೆ ಎಂದು ಹಸಿರು ಸೇನೆ ಮತ್ತು ರೈತ ಸಂಘದ ತಾಲ್ಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ ಮಂಗಳವಾರ ತಿಳಿಸಿದರು.

ಬೆಳೆವಿಮೆ ಪರಿಹಾರ ಫಲಾನುಭವಿ  ಶೇ.90 ರಷ್ಟು ರೈತರು ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿಯೇ ಖಾತೆ ಹೊಂದಿದ್ದಾರೆ. ಆದ್ದರಿಂದ ರೈತರಿಗೆ ತಾಲ್ಲೂಕಿನಲ್ಲಿರುವ ಕೃಷಿ ಸಹಕಾರಿ ಸಂಘಗಳ ಮುಖಾಂತರ ಬೆಳೆವಿಮೆ ನೀಡುವುದು ಉತ್ತಮ ಮಾರ್ಗ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ ಆಗ್ರಹಿಸಿದರು.

ಸಿದ್ಧನಗೌಡ ಪಾಟೀಲ, ಗುಲಾಬ್‌ ಬಡಗಿ, ಫಕ್ಕೀರಗೌಡ್ರ ಕಲ್ಲನಗೌಡ್ರ, ಚನ್ನಬಸಪ್ಪ ಪಾಟೀಲ, ಮೌಲಾಸಾಬ್‌ ಅಗಸರ, ನಿಂಗಪ್ಪ ದಾನಪ್ಪನವರ, ಚಂದ್ರಕಾಂತ ಪಾಟೀಲ, ಸುಭಾಸ ಶಿಗ್ಗಾಂವ, ಚನ್ನಬಸಪ್ಪ ಗುಡ್ಡಪ್ಪನವರ, ಲಕ್ಷ್ಮಣ ಬಾಳಂಬೀಡ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.